ನಾಡಪ್ರಭು ಕೆಂಪೇಗೌಡ ಬಡಾವಣೆಗೆ ರೂ.650 ಕೋಟಿ ಬ್ರೇಕ್.

kannada t-shirts

ಬೆಂಗಳೂರು, ಅಕ್ಟೋಬರ್ 6, 2021 (www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆಂಪೇಗೌಡ ಬಡಾವಣೆಯ ಮೂಲಭೂತಸೌಕರ್ಯ ಕಾಮಗಾರಿಗಳು, ರೂ.೬೫೦ ಕೋಟಿಗಳಷ್ಟು ವ್ಯತ್ಯಯ ವೆಚ್ಚ ಹೆಚ್ಚಳದ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ. ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ನೀಡುವಲ್ಲಿ ಬಿಡಿಎ ಹಿಂದೆ-ಮುಂದೆ ನೋಡುತ್ತಿರುವ ಕಾರಣದಿಂದಾಗಿ ನಿರ್ಮಾಣ ಕಂಪನಿಗಳು ಕಾಮಗಾರಿಗಳನ್ನು ಸ್ಥಗಿತಗೊಳಿಸಿವೆ.

ಕೆಂಪೇಗೌಡ ಬಡಾವಣೆ ೨,೬೦೦-ಎಕರೆ ವ್ಯಾಪ್ತಿಯಲ್ಲಿ ಹರಡಿದ್ದು, ಬಿಡಿಎ ಒಟ್ಟು ರೂ.೧,೮೦೦ ಕೋಟಿ ವೆಚ್ಚದಲ್ಲಿ ಈ ಬಡಾವಣೆಗೆ ಮೂಲಭೂಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಎಲ್&ಟಿ ಹಾಗೂ ಎಸ್‌ಎಂಪಿಎಲ್ ಇನ್ಫಾç ಲಿ./ಅಮೃತಾ ಕನ್ಸ್ಟ್ರಕ್ಷನ್ಸ್ ಈ ಎರಡು ಕಂಪನಿಗಳಿಗೆ ಗುತ್ತಿಗೆಗಳನ್ನು ನೀಡಿತ್ತು. ಈ ಬಡಾವಣೆ ವಿವಿಧ ಅಳತೆಯ ೨೩,೦೦೦ ನಿವೇಶನಗಳನ್ನು ಹೊಂದಿದೆ. ಈವರೆಗೆ ಗುತ್ತಿಗೆದಾರರು ಒಟ್ಟು ಕಾಮಗಾರಿಗಳ ಪೈಕಿ ಕೇವಲ ೪೧%ರಷ್ಟು ಮಾತ್ರ ಪೂರ್ಣಗೊಳಿಸಿದ್ದಾರೆ.

“ಈ ಹಿಂದೆ ಶೇಕಡಾ ೫ರಷ್ಟಿದ್ದ ಮಾಸಿಕ ಕಾಮಗಾರಿಗಳ ಪ್ರಗತಿ ಈಗ ಶೇಕಡ ೧ಕ್ಕೆ ಇಳಿದಿದೆ. ಈಗಂತೂ ಈ ಬಡಾವಣೆಯಲ್ಲಿ ಜನ ಅಥವಾ ಯಾವುದೇ ಯಂತ್ರೋಪಕರಣಗಳು ಕೆಲಸದಲ್ಲಿ ತೊಡಗಿರುವುದು ನಮಗೆ ಕಾಣುತ್ತಲೇ ಇಲ್ಲ. ಬಡಾವಣೆಯ ಎಲ್ಲಾ ಪ್ರಮುಖ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಡಿಸೆಂಬರ್ ವೇಳೆಗೆ ಎಲ್ಲಾ ಮೂಲಭೂಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ರೆರಾ ವತಿಯಿಂದ ಬಿಡಿಎಗೆ ಆದೇಶ ಹೊರಡಿಸಿರುವ ಹೊರತಾಗಿಯೂ ಪರಿಸ್ಥಿತಿ ಹೀಗಿದೆ,” ಎನ್ನುತ್ತಾರೆ ಕೆಂಪೇಗೌಡ ಬಡಾವಣೆಯ ನಿವೇಶನವೊಂದರ ಮಾಲೀಕರಾದ ಸೂರ್ಯ ಕಿರಣ್.

ಆದರೆ ಬಿಡಿಎ ಅಧಿಕಾರಿಗಳು ಕಾಮಗಾರಿಗಳು ಸ್ಥಗಿತಗೊಂಡಿರುವುದಕ್ಕೆ ಗುತ್ತಿಗೆದಾರರನ್ನು ದೂರಿದ್ದಾರೆ. “ಯೋಜನಾ ವೆಚ್ಚವನ್ನು ಕಡಿಮೆಗೊಳಿಸಲು ಕೆಲವು ಕಾಮಗಾರಿಗಳನ್ನು ಕಡಿಮೆಗೊಳಿಸುವ ಕುರಿತು ಇನ್ನೂ ಯೋಚಿಸರಲಿಲ್ಲ. ಮ್ಯಾನ್‌ಹೋಲ್‌ ಗಳ ಸಂಖ್ಯೆ ಹಾಗೂ ಅಂಡರ್‌ಗ್ರೌಂಡ್ ಯುಟಿಲಿಟಿ ಡಕ್ಟ್ ನ ಒಟ್ಟು ಉದ್ದವನ್ನು ಕಡಿಮೆಗೊಳಿಸಲಾಗಿತ್ತು. ನಾವು ಗುತ್ತಿಗೆದಾರರಿಗೆ ಟೆಂಡರ್ ನೀಡಿರುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೆವು, ಆದರೆ ಅವರು ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ,” ಎನ್ನುತ್ತಾರೆ ಬಿಡಿಎದ ಹಿರಿಯ ಅಧಿಕಾರಿಯೊಬ್ಬರು.

ಯೋಜಿಸದೇ ಇದ್ದಂತಹ ಕಾಮಗಾರಿಗಳ ಪೈಕಿ ವಿದ್ಯುತ್ ಸಬ್‌ ಸ್ಟೇಷನ್ ನಿರ್ಮಾಣ ಕಾಮಗಾರಿಯೂ ಸೇರಿದೆ. ಬಿಡಿಎ ಇತ್ತೀಚೆಗಷ್ಟೇ ವಿದ್ಯುತ್ ಕಾಮಗಾರಿಗಳಿಗಾಗಿ ಸಬ್‌ ಸ್ಟೇಷನ್ ಕಾಮಗಾರಿಯನ್ನು ಕೈಗೊಳ್ಳಲು ನಿರ್ಧರಿಸಿತ್ತು. ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 18 ತಿಂಗಳ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆ ಅಂತಿಮ ರೂಪು ಪಡೆಯಲು ಹಾಗೂ ನಿವಾಸಿಗಳು ಕಟ್ಟಡಗಳನ್ನು ನಿರ್ಮಿಸಲು ಇನ್ನೂ ಹೆಚ್ಚಿನ ಸಮಯದವರೆಗೆ ಕಾಯಬೇಕಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಿಡಿಎ ಸಭೆಯಲ್ಲಿ ವ್ಯತ್ಯಯ ವೆಚ್ಚದ ವಿವರಗಳನ್ನು ಮಂಡಿಸಲಾಗಿತ್ತು. ಆದರೆ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಬಿಡಿಎ ಇನ್ನೂ ಆಡಳಿತಾತ್ಮಕ ಅನುಮೋದನೆ ನೀಡುವುದು ಬಾಕಿಯಿದೆ.

ಈ ವಿಳಂಬದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಮನೆ ನಿರ್ಮಿಸಿಕೊಳ್ಳಲು ಕಾಯುತ್ತಿರುವಂತ ನಿವೇಶನ ಮಾಲೀಕರುಗಳು ಅಸಮಾಧಾನಗೊಂಡಿದ್ದಾರೆ. ಎಸ್ಕ್ರೋ ಖಾತೆ ಸೃಷ್ಟಿಸಿದೆ ಬಡಾವಣೆ ನಿರ್ಮಾಣದಲ್ಲಿ ಬಿಡಿಎ ಮಾಡಿರುವ ಅಸಮರ್ಪಕ ನಿರ್ವಹಣೆಯ ಕುರಿತು ನಿವೇಶನ ಮಾಲೀಕರು ದೂರಿದ್ದಾರೆ. ನಿವೇಶನಗಳ ಮಾರಾಟದಿಂದ ಬಂದಂತಹ ಹಣವನ್ನು ಪ್ರಾಧಿಕಾರವು ರೆರಾ ಆದೇಶಗಳನ್ನು ಉಲ್ಲಂಘಿಸುವ ಇತರೆ ಯೋಜನೆಗಳ ಮೇಲೆ ವ್ಯಯಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. ಬಿಡಿಎ, ಕೆಂಪೇಗೌಡ ಬಡಾವಣೆಯ ೨೩,೦೦೦ ನಿವೇಶನಗಳ ಮಾರಾಟದಿಂದ ಸುಮಾರು ರೂ.೨೬,೮೫೩ ಕೋಟಿ ಹಣ ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Rs 650 crore- break – Nadaprabhu Kempegowda- project

website developers in mysore