ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಕೇಸ್: ಎಎಸ್ ಐ ಅಪರಾಧಿ ಎಂದು ಕೋರ್ಟ್ ತೀರ್ಪು ಪ್ರಕಟ

ತುಮಕೂರು,ಜನವರಿ,29,2022(www.justkannada.in):  ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಎಸ್​ಐ ಉಮೇಶಯ್ಯ ಅಪರಾಧಿ ಎಂದು ತುಮಕೂರು ಸೆಷನ್ಸ್​  ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಎಎಸ್ ಐ ಉಮೇಶಯ್ಯ 2017ರಲ್ಲಿ ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ಬುದ್ದಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿದ್ದ.  ತುಮಕೂರು ಗ್ರಾಮಾಂತರ ಠಾಣೆ ಎಎಸ್​ಐ ಆಗಿದ್ದ ಉಮೇಶಯ್ಯ, ಡ್ರಾಪ್​ ಕೊಡುವ ನೆಪದಲ್ಲಿ ಬೊಲೆರೊ ವಾಹನದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದ.

ಈ ಕುರಿತು ಸಂತ್ರಸ್ತೆಯ ಕುಟುಂಬಸ್ಥರು  ಪೊಲೀಸ್ ದೂರು ನೀಡಿದ್ದರು. ಈ ಅತ್ಯಾಚಾರ ಪ್ರಕರಣದ ಸುದ್ಧಿ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿತ್ತು.  ಎಎಸ್​ಐ ಅತ್ಯಾಚಾರ ಪ್ರಕರಣದ ಕುರಿತು ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು.

ಪ್ರಕರಣ ಸಂಬಂಧ ಎಎಸ್ ಐ ಉಮೇಶಯ್ಯ ಅಪರಾಧಿ ಎಂದು ಜಡ್ಜ್​ ಹೆಚ್.ಎಸ್.ಮಲ್ಲಿಕಾರ್ಜುನಸ್ವಾಮಿ ತೀರ್ಪು ಪ್ರಕಟಿಸಿದ್ದಾರೆ. 2ನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರನನ್ನು ಆರೋಪ ಮುಕ್ತಗೊಳಿಸಿ ಕೋರ್ಟ್ ಆದೇಶ ನೀಡಿದೆ. ಇದೇ ಜನವರಿ 31 ರಂದು ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟ ಮಾಡಲಿದೆ.

Key words: rape Case –ASI- Guilty- court