ರಮ್ಯಾ ಅವರು ಆ ರೀತಿಯ ಟ್ಚೀಟ್ ಮಾಡಬಾರದಿತ್ತು- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್

ಮೈಸೂರು,ಮೇ,13,2022(www.justkannada.in): ಮಾಜಿ ಸಂಸದೆ ರಮ್ಯಾ ಮಾಡಿರುವ ಟ್ಚೀಟ್ ನಿಂದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ರಮ್ಯಾ ಅವರು ಆ ರೀತಿಯ ಟ್ಚೀಟ್ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಹಮದ್ ನಲಪಾಡ್, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ. ದೊಡ್ಡವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಯೂತ್ ಕಾಂಗ್ರೆಸ್ ಬಲಪಡಿಸುವುದಷ್ಟೇ ನನ್ನ ಕೆಲಸ. ರಮ್ಯಾ ಆ ರೀತಿಯ ಟ್ಚೀಟ್ ಮಾಡಬಾರದಿತ್ತು. ಸಾಮಾಜಿಕ ಜಾಲತಾಣದಲ್ಲಿ ಆ ರೀತಿ ಹಾಕಬಾರದಿತ್ತು. ರಮ್ಯಾ ಮಾಜಿ ಸಂಸದರೆಂಬುದನ್ನು ಹೊರತುಪಡಿಸಿದರೇ ಅವರೇನೆಂದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಅವರ ಸ್ಥಾನಮಾನವೇನೆಂದು ಗೊತ್ತಿಲ್ಲ. ರಮ್ಯ ಆ ರೀತಿ ಟ್ಚೀಟ್ ಮಾಡಿದ್ದು ಸರಿಯಾ? ಹಾಗಂತ ನಾನು ರಮ್ಯಾ ವಿರುದ್ದವಲ್ಲ, ಕಿರಿಯ ವಯಸ್ಸಿನಲ್ಲೇ ಅವರು ಸಂಸದರಾಗಿದ್ದವರು. ಆದರೆ ರಮ್ಯಾ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ. ರಮ್ಯಾ ಅವರ ಟ್ವೀಟ್ ಗೆ ಪ್ರತಿಯಾಗಿ ನಾನು ಟ್ವೀಟ್ ಮಾಡಿಲ್ಲ. ಯಾವುದೇ ವಿಚಾರಗಳಿದ್ದರೂ ಮಾತುಕತೆ ಮೂಲಕ ತಿಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಏನನ್ನೂ ಹಾಕಬಾರದು. ಏನಿದ್ದರೂ ದೂರವಾಣಿ ಮೂಲಕ ತಿಳಿಸುವಂತೆ ರಮ್ಯಾರಿಗೆ ಮನವಿ ಮಾಡುತ್ತೇನೆ ಎಂದರು.

ಬಿಜೆಪಿ ಸರ್ಕಾರ ಸಮಾಜವನ್ನು ವಿಭಜಿಸುವುದರಲ್ಲೇ ನಿರತವಾಗಿದೆ. ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹುಟ್ಟುಹಬ್ಬದ ದಿನದಂದು ಮಂಡ್ಯದ ಮೈ ಷುಗರ್ಸ್ ಕಾರ್ಖಾನೆ ಬಳಿ ಯುವ ಕಾಂಗ್ರೆಸ್ ಶ್ರಮದಾನ ಮಾಡಲಿದೆ. ಸಕ್ಕರೆ ಕಾರ್ಖಾನೆ ಆವರಣವನ್ನು ಸ್ವಚ್ಚ ಮಾಡಲಾಗುತ್ತದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೈ ಷುಗರ್ಸ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಮಾಡಲಾಗುತ್ತದೆ ಎಂದರು.

ಮಹಮದ್ ಹ್ಯಾರಿಸ್ ನಲಪಾಡ್ ಯಾರು? ಆತ ಜೈಲಿಗೆ ಹೋಗಿ ಬಂದವನು ಎಂದು ಬಿಂಬಿಸುತ್ತಿರುವ ವಿಚಾರ. ಈ ಬಗ್ಗೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಹಮದ್ ಹ್ಯಾರಿಸ್ ನಲಪಾಡ್ ತಿಳಿಸಿದರು.

Key words: Ramya – tweet-State –Youth- Congress -President -Mohamed Nalapad