ಕೇಂದ್ರ ಸರ್ಕಾರದಿಂದ ನಮ್ಮ ಫೋನ್ ಟ್ಯಾಪಿಂಗ್ – ದಿನೇಶ್ ಗುಂಡೂರಾವ್ ಗಂಭೀರ ಆರೋಪ…..

ಬೆಂಗಳೂರು,ಆ,16,2019(www.justkannada.in): ಕೇಂದ್ರ ಸರ್ಕಾರ ನಮ್ಮ ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಇಂದಿಗೂ ನಮ್ಮ ಫೋನ್ ಕದ್ದಾಲಿಕೆ ನಡೆಯಿತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.

ಫೋನ್ ಟ್ಯಾಪಿಂಗ್ ವಿಚಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ದಿನೇಶ್ ಗುಂಡೂರಾವ್, ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿರುವುದು ಬಿಜೆಪಿಯವರು. ಸರ್ಕಾರ ನಿಮ್ಮದೇ ಇದೆ, ತನಿಖೆ ಮಾಡಿಸಿ. ಈ ಹಿಂದೆಯೂ ಫೋನ್ ಟ್ಯಾಪಿಂಗ್ ಆಗಿದೆ. ಕಾನೂನು ಬಾಹಿರವಾಗಿದ್ದರೆ ಕ್ರಮ ತೆಗೆದುಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಕೃಷಿ ಸಮ್ಮಾನ್ ಯೋಜನೆಗೆ ಅನ್ನಭಾಗ್ಯ ಕಡಿತಕ್ಕೆ ಚಿಂತನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ಜನಪರ ಕಲ್ಯಾಣ ಯೋಜನೆಗೆ ಕಡಿತ ಸರಿಯಲ್ಲ. ಬಡಜನರ ಯೋಜನೆ ಕಡಿತಕ್ಕೆ ಕೈಹಾಕಿರುವುದು ತಪ್ಪು. ಇಂತಹ ಕೆಲಸವನ್ನ ಸರ್ಕಾರ ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

50 ರಷ್ಟು ತಾಲೂಕು ಬರಪೀಡಿತವಾಗಿವೆ. ಅನ್ನಭಾಗ್ಯ ಬಡಕುಟುಂಬಕ್ಕೆ ಆಧಾರವಾಗಿದೆ. ಅನ್ನಭಾಗ್ಯ ರದ್ಧುಪಡಿಸಿದರೆ ನಾವು ಸುಮ್ಮನಿರಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ರದ್ದುಪಡಿಸಿದರೆ ಜನ ವಿರೋಧಿ. ಬೇಕಾದರೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಿಸಿಕೊಳ್ಳಿ ಎಂದು ರಾಜ್ಯ ಸರ್ಕಾರದ ಚಿಂತನೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.

ಕೇಂದ್ರದ ಅನುದಾನ ವಿಳಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಒಬ್ಬರೇ ತಿರುಗಾಡಿ ಸರಿಮಾಡ್ತೇವೆ ಅಂದರೆ ಸಾಧ್ಯವಾಗಲ್ಲ. ಸಂಪುಟವಿಲ್ಲದೆ ಆಡಳಿತ ನಡೆಸಿದ್ದು ಇದೇ ಮೊದಲು. 30 ವರ್ಷದಲ್ಲಿ ದಾಖಲೆಯನ್ನ ನಿರ್ಮಿಸಿದ್ದೀರ. ಇದೀಗ ದೆಹಲಿಗೆ ಭೇಟಿ ನೀಡಿ ಪ್ರಧಾನಿ ಭೇಟಿಯಾಗಿದ್ದೀರಾ. ಆದರೆ ಇನ್ನೂ ಕಚೇರಿಯಿಂದ ಒಂದು ಮಾಹಿತಿ ಹೊರಬಿದ್ದಿಲ್ಲ. ಪ್ರಧಾನಿ ಭೇಟಿಯಾದರೆ ಸಾಲದು, ಹೆಚ್ಚಿನ ಅನುದಾನ ತನ್ನಿ ಎಂದು ಸಲಹೆ ನೀಡಿದರು.

ನೀವು ಪ್ರಧಾನಿಯವರನ್ನ ರಾಜ್ಯಕ್ಕೆ ಕರೆತರಬೇಕಿತ್ತು. ಪ್ರವಾಹ ಪೀಡಿತ ಸ್ಥಳಕ್ಕೆ ಯಾಕೆ ಕರೆತರಲಿಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಸರಿಯಲ್ಲ. ರಾಜ್ಯದ ಜನರಿಗೆ ಅನ್ಯಾಯವೆಸಗುವುದು ತಪ್ಪು ಎಂದು ರಾಜ್ಯ ಸರ್ಕಾರದ ವಿರುದ್ದ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದರು.
key words: Our –phone tapping – central government- Dinesh Gundurao