ಒಡಿಶಾ ರೈಲು ದುರಂತ: ಹೆಚ್ಚಾದ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ಕೂಗು

ಬೆಂಗಳೂರು, ಜೂನ್ 04, 2023 (www.justkannada.in): ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಳಿ ದೇಶದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆಗೆ ಒತ್ತಡ ಹೆಚ್ಚಾಗಿದೆ.

ನಿನ್ನೆಯ ಅಪಘಾತ ಹಲವು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ದುರಂತಗಳಲ್ಲೊಂದಾಗಿದ್ದು, ಕನಿಷ್ಠ 270 ಜನರು ಮೃತಪಟ್ಟಿದ್ದಾರೆ.

ಸರಕಾರವು ಕೇವಲ ಐಷಾರಾಮಿ ರೈಲುಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದೆ ಮತ್ತು ಸಾಮಾನ್ಯ ಜನರು ಪ್ರಯಾಣಿಸುವ ರೈಲುಗಳನ್ನು ಮತ್ತು ಮಾರ್ಗಗಳನ್ನು ನಿರ್ಲಕ್ಷಿಸುತ್ತಿದೆ  ಎಂದು ಪ್ರತಿ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಸ್ವತಂತ್ರ ಭಾರತದಲ್ಲಿ ಭಾರೀ ದುರಂತಗಳ ಬಳಿಕ ರೈಲ್ವೆ ಸಚಿವರು ತಮ್ಮ ರಾಜೀನಾಮೆಗಳ ಕೊಡುಗೆಯನ್ನು ಮುಂದಿರಿಸುವುದು ಪರಿಪಾಠವಾಗಿದೆ.

1956ರಲ್ಲಿ ಲಾಲ್ ಬಹಾದೂರ ಶಾಸ್ತ್ರಿಯವರು ಎರಡು ಸಲ ರೈಲ್ವೆ ಸಚಿವರ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. 1999ರಲ್ಲಿ 290 ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಅಸ್ಸಾಮಿನಲ್ಲಿ ಸಂಭವಿಸಿದ್ದ ಭಾರೀ ರೈಲು ಅಪಘಾತದ ಬಳಿಕ ನಿತೀಶ್ ರೈಲ್ವೆ ಸಚಿವರ ಹುದ್ದೆಗೆ ರಾಜೀನಾಮೆ ನೀಡಿದ್ದರು.