ಚಾಮುಂಡಿ ಬೆಟ್ಟದ ಮೇಲೆ ವಾಸವಾಗಿರುವವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು, ಜುಲೈ 6, 2022(www.justkannada.in): ಚಾಮುಂಡಿ ಬೆಟ್ಟದ ಮೇಲೆ ವಾಸವಾಗಿರುವವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

 ಈ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಮುಂಡಿ ಬೆಟ್ಟ ರೋಪ್ ವೇ ನಿರ್ಮಾಣ ವಿಷಯದ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಮತ್ತು ವಿವೇಚನಾರಹಿತ ಬೆಳವಣಿಗೆಗೆ ಕಡಿವಾಣ ಹಾಕುವ ಸಲುವಾಗಿ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಅಭಿಪ್ರಾಯ ಜನಪ್ರತಿನಿಧಿಗಳಿಂದ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಇನ್ನು ಮುಂದೆ ಹೊಸದಾಗಿ ಮನೆ ಕಟ್ಟುವವರಿಗೆ ಬೆಟ್ಟದ ಕೆಳ ಭಾಗದಲ್ಲಿ ನಿವೇಶನ ನೀಡಲು ಜಾಗ ಗುರುತಿಸುವಂತೆ ಮೂಡಾ ಅಧ್ಯಕ್ಷರನ್ನು ಕೇಳಿಕೊಳ್ಳಲಾಯಿತು. ಆದರೆ ಪ್ರಸ್ತುತ ವಾಸವಾಗಿರುವವರನ್ನು ಸ್ಥಳಾಂತರಿಸುವ ಅಥವಾ ಒಕ್ಕಲೆಬ್ಬಿಸುವ ಯಾವುದೇ ವಿಚಾರಗಳು ಪ್ರಸ್ತಾಪವಾಗಿಲ್ಲ ಎಂದರು.

ಕುಟುಂಬಗಳು ವರ್ಷ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನವನ್ನು ಬೆಟ್ಟದ ಕೆಳಭಾಗದಲ್ಲಿ ಗುರುತಿಸುವಂತೆ ಸೂಚಿಸಲಾಯಿತೇ ಹೊರತು ಇದ್ದವರನ್ನು ಸ್ಥಳಾಂತರ ಅಥವಾ ಒಕ್ಕಲೆಬ್ಬಿಸುವ ಅಭಿಪ್ರಾಯವನ್ನು ಯಾರೂ ಕೊಟ್ಟಿಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

Key words: no proposal – residents – Chamundi Hill- Minister- ST Somashekhar.