‘ನಮ್ಮ ಕ್ಲಿನಿಕ್’ ಬಹಳ ವಿಶಾಲವಾಗಿ ವ್ಯವಸ್ಥಿತವಾಗಿದೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಡಿಸೆಂಬರ್ 25, 2022 (www.justkannada.in): ನಮ್ಮ ಕ್ಲಿನಿಕ್ ಬಹಳ ವಿಶಾಲವಾಗಿ ವ್ಯವಸ್ಥಿತ  ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ     ಶ್ರೀರಾಂಪುರದ ಮಧುವನ ಲೇಔಟ್ ನಲ್ಲಿ     ಹಮ್ಮಿಕೊಳ್ಳಲಾಗಿದ್ದ  ನಮ್ಮ ಕ್ಲಿನಿಕ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ  ಸಚಿವರು ಇತರೆ ಆರೋಗ್ಯ ಕೇಂದ್ರಗಳಂತೆ  ನಮ್ಮ ಕ್ಲಿನಿಕ್ ಆಗುವುದು ಬೇಡ, ಈ ಮೂಲಕ ವಿಶೇಷ ಚೇತನ ಮಕ್ಕಳ ಮೇಲಿರುವ  ಕಾಳಜಿ ಯಾವಾಗಲೂ ಕೂಡ  ಹೀಗೆ ಮುಂದುವರೆಯಲಿ  ಎಂದು ತಿಳಿಸಿದರು.

ಕೃಷ್ಣರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಎಸ್ಎ ರಾಮದಾಸ್ ರವರು ಮಾತನಾಡಿ ನಮ್ಮ ಕ್ಲಿನಿಕ್ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ ಇದು ವರ್ಷವಿಡೀ ಇರುವಂತದ್ದು, ಈ ಕಾರ್ಯಕ್ರಮವನ್ನು ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟು ಹಬ್ಬದ ದಿನದಂದು ನಡೆಸುತ್ತಿರುವುದು ಬಹಳ ಅರ್ಥಪೂರ್ಣ ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ರವರು ಸಾಂವಿಧಾನಿಕವಾಗಿ ವಿಶೇಷ ಚೇತನರಿಗೆ ಮೊದಲಿಗೆ ಸೌಲಭ್ಯ ತಂದರು, ೪೫ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಮೊದಲಿಗೆ ನಿರ್ಮಿಸಿದರು, ಜೈ ವಿಜ್ಞಾನ್ ಎನ್ನುತ್ತಾ ದೇಶಕ್ಕೆ ತಂತ್ರಜ್ಞಾನವನ್ನು ಸ್ವಾಗತಿಸಿದರು ಎಂದು ಸಂತಸ ವ್ಯಕ್ತಪಡಿಸುತ್ತಾ, ಈ ಕ್ಲಿನಿಕ್ ನನ್ನ ಮನೆ ನನ್ನ ಡಾಕ್ಟರ್ ಎಂಬ ಭಾವನೆಯನ್ನು, ಔಷಧಿಗೂ ಮುನ್ನ ಆಪ್ತ ಸಮಾಲೋಚನೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ವಾಟರ್ ಬೆಡ್, ವೀಲ್ ಚೇರ್,ಏರ್ ಬೆಡ್, ಎಂಆರ್‌ ಕಿಟ್ ಕ್ರಚಸ್ ಹಾಗೂ ಸಿಪಿ ಚೇರ್ ಗಳನ್ನು ವಿತರಿಸಲಾಯಿತು.  ಮುಖ್ಯ ಅತಿಥಿಗಳಾಗಿ  ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ  ಶಿವಕುಮಾರ್ ಸೇರಿದಂತೆ  ಇತರೆ ಗಣ್ಯರು ಉಪಸ್ಥಿತರಿದ್ದರು.