ನಳೀನ್ ಕುಮಾರ್ ಕಟೀಲ್ ಗೆ ಕನಿಷ್ಟ ಜ್ಞಾನ ಇಲ್ಲ: ಸಿಎಂ ಬಿಎಸ್ ವೈರಿಂದ ದ್ವೇಷದ ರಾಜಕಾರಣ- ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ..

kannada t-shirts

ಬೆಂಗಳೂರು,ಸೆ,9,2019(www.justkannada.in): ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಈಗ ಮಾಡುತ್ತಿರುವುದು ಏನು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

ಅನ್ನಭಾಗ್ಯ, ಕೃಷಿ ಯೋಜನೆ ಸೇರಿ ಐದು ಯೋಜನೆಗಳ ಬಗ್ಗೆ ತನಿಖೆಗೆ ನೀಡಿರುವ ಕುರಿತು ಮಾತನಾಡಿ ಸಿಎಂ ಬಿಎಸ್ ವೈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವು ಜಾರಿಗೆ ತಂದಿದ್ದ ಕೃಷಿ ಯೋಜನೆ, ಅನ್ನಭಾಗ್ಯ ಯೋಜನೆಯನ್ನ ಜನರು ಸ್ವಾಗತಿಸಿದ್ದಾರೆ. ಬಿಎಸ್ ವೈ ಅಧಿಕಾರ ವಹಿಸಿಕೊಂಡ ಮೊದಲ ದಿನ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಈಗ ಅವರು ಈ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಯೋಜನೆಯಲ್ಲಿ ಅಕ್ರಮ ನಡೆದಿದ್ದರೇ ತನಿಖೆಯಾಗಲಿ. ಅದನ್ನ ಬಿಟ್ಟು ದ್ವೇಷದ ರಾಜಕಾರಣಕ್ಕಾಗಿ ತನಿಖೆ ಮಾಡೋದು ಬೇಡ ಎಂದು ಹರಿಹಾಯ್ದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ,..

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ದ  ಕಿಡಿಕಾರಿದ ಸಿದ್ಧರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ, ಅವರಿಗೆ ಐಟಿ, ಇಡಿ ಯಾರ ಅಧೀನದಲ್ಲಿವೆ ಎಂಬುದು ಗೊತ್ತಿದೆಯೇ ಎಂದು ಲೇವಿಡಿ ಮಾಡಿದರು.

 ಸಿದ್ದರಾಮಯ್ಯ ಅವರಿಂದಲೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋದರು ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೆಶನಾಲಯ ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಈ ಕುರಿತು ಅವರಿಗೆ ತಿಳಿದಿಲ್ಲವೇ? ಇಂತಹವರನ್ನು ಯಾಕೆ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೋ? ಹುಳಿ ಹಿಂಡುವುದು, ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು.

Key words: Naleen Kumar Kateel -no knowledge-CM BS yeddyurappa-Former CM -Siddaramaiah -outrage

website developers in mysore