ಸಾಲಿಗ್ರಾಮದಲ್ಲಿ ನಡೆದ ಗಲಾಟೆ, ದೌರ್ಜನ್ಯ ಪ್ರಕರಣ:  ಏಳು ಮಂದಿ ಆರೋಪಿಗಳ ಬಂಧನ

ಮೈಸೂರು,ಡಿ,16,2019(www.justkannada.in): ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ನಗರ ಠಾಣೆ ಪೊಲೀಸರು  ಏಳು ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.

ಸಾಲಿಗ್ರಾಮದ ಚಂದ್ರು (23), ಮಂಜು(30), ಅರುಣ್‌ಗೌಡ (24), ಚೇತನ್(28), ಮಂಜು(31), ಸರ್ವೇಶ(26), ದಿಲೀಪ್(38) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು  ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣ ಸಂಬಂಧ ತಲೆಮರಿಸಿಕೊಂಡಿರುವ ಬಾಕಿ 30 ಪ್ರಮುಖ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳ ಬಂಧನಕ್ಕೆ ತನಿಖಾಧಿಕಾರಿ ಡಿವೈಎಸ್ಪಿ ಸುಂದರ್ ರಾಜು ವಿಶೇಷ ತಂಡ ರಚಿಸಿ ಶೋಧ ಕಾರ್ಯಚರಣೆ ಆರಂಭಿಸಿದ್ದಾರೆ.

ಸಾಲಿಗ್ರಾಮದ ಲೋಕೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಬಂಧಿತರು ಸೇರಿದಂತೆ 36 ಮಂದಿ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯಿದೆ ಸೇರಿದಂತೆ ಐಪಿಸಿ ಕಲಂ 143,147,148, 427, 323,324, 504, 506 ಮತ್ತು 149ರಡಿ ಪ್ರಕರಣ ದಾಖಲಿಸಿದ್ದ ಪೊಲೀಸರು, 17 ಮಂದಿಯನ್ನು ಗುರುತಿಸಿ ಅವರ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು.

ಗಲಾಟೆ, ಗುಂಪು ಘರ್ಷಣೆಯೊಂದಿಗೆ ಕಲ್ಲು ತೂರಾಟ ಕೂಡ ನಡೆದಿದ್ದು, ಈ ವೇಳೆ ಕೆಲವರು ಘಟನೆಯ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋ ದೃಶ್ಯಗಳನ್ನು ಪರಿಶೀಲನೆ ನಡೆಸಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಘಟನೆ ಸಂಬಂಧ ಇನ್ನೂ ಮೂರು ಪ್ರಕರಣಗಳು ದಾಖ ಲಾಗಿದ್ದು,  ಮೊದಲನೆಯದಾಗಿ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪ್ರಾಪ್ತ ಯುವಕನ್ನು ಬಂಧಿಸಿರುವ ಪೊಲೀಸರು ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಎರಡನೇಯದಾಗಿ ಅಜಯ್ ಎಂಬಾತನ ಮೇಲೆ ಗುಂಪೊಂದು ನಡೆಸಿದ ಹಲ್ಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ.

ಇದರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ದೊಂಬಿ ನಡೆಸಿದ ಘಟನೆ ಸಂಬಂಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.  ಅಂಬೇಡ್ಕರ್ ನಗರದಲ್ಲಿ ಸವರ್ಣೀಯರು ಕಲ್ಲು ತೂರಿದ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಕಾಣಿಸಿಕೊಂಡವರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ಹೇಳಿಕೆಯಾಧರಿಸಿ 18 ಮಂದಿಯನ್ನು ಪೋಲಿಸರು ವಿಚಾರಣೆಗೊಳಪಡಿಸಿದ್ದಾರೆ.

ಹಲ್ಲೆ ಪ್ರಕರಣ ಖಂಡಿಸಲು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಲ್ಲದೆ ಟೈರ್ ಸುಟ್ಟ ಸಂಬಂಧ 14 ಮಂದಿ ವಿರುದ್ದ ಸ್ವಯಂಪ್ರೇರಿತವಾಗಿ ದೊಂಬಿ ಕೇಸ್ ದಾಖಲು ಮಾಡಲಾಗಿದೆ.  ಗುಂಪು ಘರ್ಷಣೆಯಿಂದ ಉದ್ವಿಗ್ನವಾಗಿರುವ ಸಾಲಿಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿಯೇ ಎಎಸ್ಪಿ ಸ್ನೇಹಾ ಅವರೇ ಮೊಕ್ಕಾಂ ಹೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

key words: mysore-violence-saligrama-arrest- 7 accused