ಟಿವಿಎಸ್ ಮೋಟಾರು ಕಂಪನಿಯಲ್ಲಿ ‘ಜೀವ ವೈವಿಧ್ಯ’

ಮೈಸೂರು, ಜೂನ್,15, 2021(www.justkannada.in):  ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಬ್ರಾಂಡ್ ಆಗಿರುವ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಮೈಸೂರು ಫ್ಯಾಕ್ಟರಿ ಆವರಣವನ್ನು ಜೀವವೈವಿಧ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ಸಲುವಾಗಿ ಬಳಸಿಕೊಳ್ಳುವ ಮೂಲಕ ಪ್ರಭಾವಿ ಉದಾಹರಣೆಯಾಗಿ ರೂಪುಗೊಂಡಿದೆ. ಕಳೆದ 20 ವರ್ಷಗಳಿಂದ, ಕಂಪನಿ 40 ಎಕರೆ ‘ಪವಿತ್ರ ಅರಣ್ಯ’ವನ್ನು ಪೋಷಿಸಿಕೊಂಡು ಬಂದಿದ್ದು, ಇದನ್ನು ವನ್ಯಜೀವಿಗಳ ವಾಸಕ್ಕೆ ಅನುಕೂಲಕರವಾಗಿ ಪರಿವರ್ತಿಸಿದೆ. ಫ್ಯಾಕ್ಟರಿಯ ಸುತ್ತಮುತ್ತಲ ಪ್ರದೇಶವನ್ನು ಸಮೃದ್ಧ ಸಸ್ಯ ಮತ್ತು ಪ್ರಾಣಿ ಪ್ರಬೇಧದ ಆವಾಸಸ್ಥಾನವಾಗಿ ಅಭಿವೃದ್ಧಿಪಡಿಸಿದೆ.jk

ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷರಾದ ಶ್ರೀ ವೇಣು ಶ್ರೀನಿವಾಸನ್ ಅವರ ದೂರದೃಷ್ಟಿ ಮತ್ತು ಮಾರ್ಗದರ್ಶನದಡಿ ಕಂಪನಿಯು ಮೈಸೂರು ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜೀವವೈವಿಧ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಮತ್ತು ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. 1999ರಲ್ಲಿ ಈ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಇಂದು 158 ಸಸ್ಯಪ್ರಬೇಧಗಳು ಮತ್ತು 290 ಪ್ರಾಣಿ ಪ್ರಬೇಧಗಳು ಇಲ್ಲಿವೆ. ಆರಂಭದಿಂದಲೂ ಕಂಪನಿಯು 45 ಸಾವಿರಕ್ಕೂ ಅಧಿಕ ಗಿಡಗಳನ್ನು ಅರಣ್ಯದಲ್ಲಿ ಬೆಳೆಸಿದ್ದು, ಕಳೆದ ಎರಡು ವರ್ಷದಲ್ಲಿ 5000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಿದೆ.

ಟಿವಿಎಸ್ ಮೋಟಾರ್‍ನ ಮೈಸೂರು ಕಾರ್ಖನೆಯಲ್ಲಿ ಪಕ್ಷಿಧಾಮ, ಆಕರ್ಷಕ ಚಿಟ್ಟೆಗಳ ಉದ್ಯಾನವನ, ಸಸ್ಯಶಾಸ್ತ್ರ ಉದ್ಯಾನವನ, ಸಾವಯವ ಕಾಂಪೋಸ್ಟ್ ಕೇಂದ್ರ ಮತ್ತು ಐದು ಕೆರೆಗಳಿವೆ. ಈ ಅರಣ್ಯವು ನೂರಾರು ನವಿಲು, ಗೂಬೆ, ವೈವಿಧ್ಯಮಯ ನೀರು ಹಕ್ಕಿಗಳು, ಹಾವುಗಳು, ಪುನುಗುಬೆಕ್ಕು, ಅಳಿಲುಗಳು ಮತ್ತಿತರ ಪ್ರಾಣಿ ಪಕ್ಷಿಗಳ ಸಂಕುಲವನ್ನು ಹೊಂದಿದೆ. ಈ ಫ್ಯಾಕ್ಟರಿ ಆವರಣವು ಉದ್ಯೋಗಿಗಳಿಗೆ ಆಕರ್ಷಕ ಮತ್ತು ಮತ್ತೆ ಮತ್ತೆನೋಡಬೇಕೆನ್ನುವ ತಾಣವಾಗಿ ಅಭಿವೃದ್ಧಿಯಾಗಿದ್ದು, ಉದ್ಯೋಗಿಗಳು ಆವರಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ನರ್ತಿಸುವ ನವಿಲುಗಳು, ಹಚ್ಚ ಹಸಿರನ್ನು ಕಂಡು ಮುದಗೊಳ್ಳುವ ವಾತಾವರಣ ಇದೆ. ಇದು ಅಕ್ಷರಶಃ ಸುಮಧುರ ಸಹಬಾಳ್ವೆಯ ಮಹತ್ವವನ್ನು ಸಾರುತ್ತದೆ. ಇದು ತಾಜಾ ನೀರಿನ ಆಮೆ, ಕೌಜಗ, ಮುಂಗುಸಿ, ಪತಂಗಗಳು ಮತ್ತು ಇತರ ಹಲವು ಜೀವಜಂತುಗಳ ಸಂತಾನೋತ್ಪತ್ತಿ ತಾಣವೂ ಆಗಿದೆ. ಒಣ ಪೊದೆಗಳ ವಾಸತಾಣವನ್ನು ಆವರಣದೊಳಗೆ ಅಭಿವೃದ್ಧಿಪಡಿಸಲಾಗಿದ್ದು, ಇದು ವಾಸತಾಣ ವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಉತ್ಪಾದನಾ ಉದ್ಯಮದ ಒಳಗೆ ಅಪರೂಪದ ಪರಿಸರಕ್ಕೆ ಇದು ಸಾಕ್ಷಿಯಾಗಿದೆ.

ಸ್ಥಳೀಯ ಪ್ರಬೇಧದ ಗಿಡಮರಗಳನ್ನು ನೆಟ್ಟು ಪೋಷಿಸಲು ಕಂಪನಿ ಕ್ರಮಗಳನ್ನು ಕೈಗೊಂಡಿದ್ದು, ಹಾಲಿ ಇರುವ ವಾಸತಾಣವನ್ನು ವಿಸ್ತøತಪಡಿಸುವ ನಿಟ್ಟಿನಲ್ಲಿ ಕೊಳಗಳಿಂದ ನಿರಂತರ ನೀರು ಸರಬರಾಜನ್ನು ಖಾತರಿಪಡಿಸಲಾಗಿದೆ. ಹೆಚ್ಚುವರಿ ನೀರು ಹಿಡಿದಿಡುವ ಸಲುವಾಗಿ ಹೊಸ ಕೊಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜತೆಗೆ ಕೊಳಗಳಲ್ಲಿ ಪಾಚಿಗಟ್ಟುವಿಕೆಯನ್ನು ತಡೆಯುವ ಸಲುವಾಗಿ ಕೊಳಗಳನ್ನು ನಿಯತವಾಗಿ ಸ್ವಚ್ಛಗೊಳಿಸಲಾಗುತ್ತಿದೆ ಹಾಗೂ ನೀರಿನ ಡಿ-ಆಕ್ಸಿಜನೇಶನ್ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ. ಉದ್ದವಾದ ಕೊಳಗಳಲ್ಲಿ ಆರೋಗ್ಯಕರ ಮಟ್ಟದ ಆಮ್ಲಜನಕ ಕರಗುವಿಕೆಯನ್ನು ಖಾತರಿಪಡಿಸುವ ಸಲುವಾಗಿ ನಿರಂತರವಾಗಿ ಗಾಳಿಯಾಡಿಸುವ ಪ್ರಕ್ರಿಯೆಯನ್ನೂ ನಡೆಸಲಾಗುತ್ತಿದೆ. ಹಕ್ಕಿಗಳ ಪ್ರಯೋಜನಕ್ಕಾಗಿ ಮೀನು ಮತ್ತು ಬಸವನಹುಳದಂಥ ಬೇಟೆ ಪ್ರಬೇಧಗಳನ್ನು ಕೂಡಾ ಕೊಳಗಳಿಗೆ ನಿಯತವಾಗಿ ಬಿಡಲಾಗುತ್ತಿದೆ.

ಪೂರ್ಣಾವಧಿ ಪರಿಸರ ತಜ್ಞರು ಈ ಜಲತಾಣ ಮತ್ತು ಅರಣ್ಯ ಪ್ರದೇಶದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ ಹಾಗೂ ಈ ಪ್ರಾಕೃತಿಕ ವಲಯವನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ನಿಟ್ಟಿನಲ್ಲಿ ತಜ್ಞರನ್ನು ಸಂಪರ್ಕಿಸಲಾಗುತ್ತಿದೆ. ಸುರಕ್ಷಾತ್ಮಕ ಕ್ರಮವಾಗಿ, ಅರಣ್ಯ ಪ್ರದೇಶದಲ್ಲಿ ಯಾವುದೇ ತ್ಯಾಜ್ಯವನ್ನು ಎಸೆಯಲು ಅಥವಾ ತ್ಯಾಜ್ಯವನ್ನು ಹೊತ್ತಿಸಲು ಅನುಮತಿಸಲಾಗುತ್ತಿಲ್ಲ. ಜೊತೆಗೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿಸಿಲ್ಲ. ಕಾರ್ಖನೆಯ ನಿಯಮಾವಳಿಗಳು ಸಹಜ ನೆಲೆಯನ್ನು ಹಾಳುಮಾಡಬಹುದಾದ ಅಥವಾ ಕೆಡಿಸಬಹುದಾದ ಯಾವುದೇ ವಾಯು ಮಾಲಿನ್ಯಕ್ಕೆ ಮತ್ತು ಕೊಳಕು ನೀರಿಗೆ ಅವಕಾಶ ನೀಡುತ್ತಿಲ್ಲ.

Key words: mysore-TVS –Motor- Company-birds-animals- Plants