ಮೈಸೂರಿನ ಲಲಿತ ಮಹಲ್ ಗೆ ಶತಮಾನೋತ್ಸವ ಸಂಭ್ರಮ: ಹಲವು ಕಾರ್ಯಕ್ರಮಗಳ ಆಯೋಜನೆ- ಸಚಿವ ಎಸ್.ಟಿ ಸೋಮಶೇಖರ್.

ಮೈಸೂರು,ಆಗಸ್ಟ್,26,2021(www.justkannada.in): ಮೈಸೂರಿನ ಪ್ರತಿಷ್ಠಿತ ಲಲಿತ ಮಹಲ್ ಗೆ ಶತಮಾನೋತ್ಸವ ಸಂಭ್ರಮ ಅಂಗವಾಗಿ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಲಲಿತ್ ಮಹಲ್ ನಿರ್ಮಾಣ ಮಾಡಿದ್ದಾರೆ. ಲಲಿತ್ ಮಹಲ್ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಮಹಾರಾಜರ ಕೊಡುಗೆ ಹಾಗೂ ಸಾಧನೆ ಸಾರುವಂತಹ ತಾತ್ಕಾಲಿಕ ಮ್ಯೂಸಿಯಂ ನಿರ್ಮಾಣ ಮಾಡುತ್ತೇವೆ ಎಂದರು.

ಶತಮಾನೋತ್ಸವದ ಅಂಗವಾಗಿ ನವೆಂಬರ್ 21ರಿಂದ 7 ದಿನಗಳ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಏಳು ದಿನಗಳ ಕಾಲ ಲೈಟ್ ಅಂಡ್ ಮ್ಯೂಸಿಕ್ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸ್ಥಳೀಯರಿಗೆ ಅವಕಾಶ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಅನುದಾನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಅಕ್ಟೋಬರ್ ಒಳಗೆ ಕಟ್ಟಡದ ಬಣ್ಣ ಮತ್ತು ಇತರೆ ಕಾಮಗಾರಿ ಮುಕ್ತಾಯವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದರು.

Key words: mysore-lalith mahal-Centenary –celebration- many programs- Minister- ST Somashekhar.