ರಾಜಕಾರಣಿಗಳು ಕೊಟ್ಟ ಯಾವ ಭರವಸೆಯೂ ಈಡೇರಿಲ್ಲ-ಕಣ್ಣೀರಿಡುತ್ತಲೇ ನೋವು ತೋಡಿಕೊಂಡ ಕ್ಯಾತಮಾರನಹಳ್ಳಿ ರಾಜು ಅವರ ತಂಗಿ.

ಮೈಸೂರು,ಅಕ್ಟೋಬರ್,10,2022(www.justkannada.in):  ಕಳೆದ ಆರು ವರ್ಷಗಳ ಹಿಂದೆ ಮೈಸೂರಿನಲ್ಲಿ  ಆರ್.ಎಸ್ ಎಸ್ ಕಾರ್ಯಕರ್ತ  ಕ್ಯಾತಮಾರನಹಳ್ಳಿ ರಾಜು ಅವರನ್ನ ದುಷ್ಕರ್ಮಿಗಳು ಹತ್ಯೆಮಾಡಿದ್ದು, ರಾಜ್ಯಾದ್ಯಂತ  ಭಾರಿ ಸುದ‍್ಧಿಯಾಗಿತ್ತು. ಈ ಮಧ್ಯೆ ರಾಜಕಾರಣಿಗಳು ರಾಜು ಅವರ ಮನೆಗೆ ಭೇಟಿ ನೀಡಿ ಆಶ್ವಾಸನೆಗಳನ್ನ ನೀಡಿದ್ದರು. ಆದರೆ ರಾಜಕಾರಣಿಗಳು ನೀಡಿರುವ ಯಾವ ಭರವಸೆಯೂ ಈಡೇರಿಲ್ಲವಂತೆ.

ಹೌದು,  ಖುದ್ಧು ಕ್ಯಾತಮಾರನಹಳ್ಳಿ ರಾಜು ಅವರ ತಂಗಿ ಕವಿತಾ ಅವರು ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ್ದು ಕಣ್ಣೀರಿಡುತ್ತಲ್ಲೇ ತಮ್ಮ ನೋವು ತೋಡಿಕೊಂಡಿದ್ದಾರೆ. ರಾಜು ಹತ್ಯೆಯಾದಾಗ ಎಲ್ಲರು ಬಂದು ಆಶ್ವಾಸನೆ ನೀಡಿದರು. ತಂಗಿ ಓದಿಸಲು ಕಿವಿ ಓಲೆ ಅಡಮಾನ ಇಟ್ಟಿದ್ದಾರೆ. ಮೊಮ್ಮಗ ನೂರು, ಐವತ್ತು ರೂಗೆ ಸಿಲಿಂಡರ್ ಕೆಲಸ ಮಾಡ್ತಾನೆ. ನಮಗೆ 15 ಲಕ್ಷ ರೂ ಹಣ ಮಾತ್ರ ಬಂದಿದೆ ಅಂತಾರೆ. ಮಳೆ ಬಂದರೆ ಮನೆ ಕೂಡ ಸೋರುತ್ತದೆ. ಅಷ್ಟೊಂದು ಹಣ ಬಂದಿದ್ದರೆ ಲಕ್ಸುರಿ ಜೀವನ ನಡೆಸುತ್ತಿದ್ದೆವು. ರಾಜು ಇದ್ದಿದ್ದರೆ ನಾವು ಲಕ್ಸುರಿಯಾಗಿ ಇರುತ್ತಿದ್ದವು.

ರಾಜಕಾರಣಿಗಳು ಬರೀ ಕೇವಲ ಭರವಸೆ ನೀಡಿದ್ದಾರೆ. ಯಾವ ಭರವಸೆಯೂ ಕೂಡ ಈಡೇರಿಲ್ಲ. ಜಿಲ್ಲಾಡಳಿತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ಹೇಳಿದ್ದರು. ಯಾವ ಭರವಸೆಯೂ ಈಡೇರಿಲ್ಲ.  ಜನ ನೋಡಲಿ ಅಂತ ವಿಡಿಯೋ ಮಾಡಿಕೊಳ್ತಾರೆ ಎಂದು ಕವಿತಾ ಅವರು ಅಳಲು ತೋಡಿಕೊಂಡಿದ್ಧಾರೆ.

ಕೊಲೆ ಮಾಡಿದವರು ಆರಾಮಾಗಿ ಓಡಾಡುತ್ತಿದ್ದಾರೆ. ಅವರನ್ನ ಜೈಲಿನಿಂದ‌ ಏಕೆ ಬಿಡಿಸಿದ್ದಾರೆ. ನಮ್ಮಣ್ಣ ಇಲ್ಲದೆ ನಾವು ಬೀದಿಗೆ ಬಿದ್ದಿದ್ದೇವೆ. ನಮ್ಮಣ್ಣನ ಫೋಟೋವನ್ನ ರ್ಯಾಲಿಗಳಲ್ಲಿ, ಸಮಾವೇಶಗಳಲ್ಲಿ ನೋಡಿದರೆ ನೋವು ತಡೆಯಲು ಆಗಲ್ಲ. ದಯಮಾಡಿ, ಅವರ ಫೋಟೋಗಳನ್ನ ಹಾಕಬೇಡಿ. ನಮಗೆ ಆ ಫೋಟೋ ಬಳಸುವುದರಿಂದ ನೋವಾಗುತ್ತದೆ. ಸಾಕಷ್ಟು ಅದರಿಂದ ನಮಗೆ ತೊಂದರೆ ಆಗುತ್ತದೆ ಎಂದು ಕವಿತಾ ಅವರು ಮನವಿ ಮಾಡಿದ್ದಾರೆ.

Key words: mysore-kyathamaranahalli-Raju-sister-media