ಕಾಲ್ ಮುರುಕ ಕುದುರೆ ಕೊಟ್ಟು ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ?-ಸಿದ್ದರಾಮಯ್ಯ ವಿರುದ್ದ  ಮಾಜಿ ಸಿಎಂ ಹೆಚ್.ಡಿಕೆ ಪರೋಕ್ಷ ವಾಗ್ದಾಳಿ.

ಮೈಸೂರು,ಮಾರ್ಚ್,2,2023(www.justkannada.in) ಕೊಟ್ಟ ಕುದುರೆಯ ಏರದವ ವೀರನೂ ಅಲ್ಲ, ಧೀರನೂ ಅಲ್ಲ ಅಂತ ಹೇಳ್ತಾರೆ. ಕಾಲ್ ಮುರುಕ ಕುದುರೆ ಕೊಟ್ಟು ಏರು ಏರು ಎನ್ನುವವರನ್ನ ಮನೆ ಮುರುಕ ಎನ್ನುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಸಮ್ಮಿಶ್ರ ಸರ್ಕಾರ ನಡೆಯಬೇಕಾದರೆ ಸಾಲ ಮನ್ನಾ ವಿಷಯದಲ್ಲಿ ಒಂದು ದಿನ ಸಲಹೆ ನೀಡಲಿಲ್ಲ. ಮೊದಲ ಅವಧಿಯ ಬಜೆಟ್ ಮಾಡಲು ನನಗೆ ತೊಂದರೆ ನೀಡಿದರು. ಗೋಗರೆದು ಬಜೆಟ್ ಮಂಡನೆ ಮಾಡಬೇಕಾದ ಪರಿಸ್ಥಿತಿ ಎದುರಾಯ್ತು. ಸರ್ಕಾರ ನನ್ನ ಕ್ಯಾಸೆಟ್ ಮಾಡದೆ ಇದ್ದರೆ ಎರಡನೇ ಬಜೆಟ್ ಮಂಡನೆ ಆಗುತ್ತಿರಲಿಲ್ಲ. ಐದು ವರ್ಷ ಸಿಎಂ ಆಗಿದ್ದಾಗ ಮಧ್ಯಾಹ್ನದಿಂದ ಸಂಜೆವರೆಗೂ ಸಿಗುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕತ್ತೆಯಂತೆ ದುಡಿದೆ. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ನೀಡಿದ್ದೆ. ಈಗ ಎಲ್ಲಾ ಕಡೆಗಳಲ್ಲಿ ಭಾಷಣ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರ ಕಾಯಿಲೆ ಇದೀಗ ಅಮಿತ್ ಶಾ ಅವರಿಗೂ ಶುರುವಾಗಿದೆ. ಜೆಡಿಎಸ್‌ ಅವರಿಗೆ ಮತ ನೀಡಿದರೆ ಕಾಂಗ್ರೆಸ್ ಅವರಿಗೆ ಮತ ನೀಡಿದಂತೆ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರ ಇತಿಹಾಸ ನೋಡಿದರೆ ಹೇಗಿದ್ದವರು ಏನಾಗಿದ್ದಾರೆ ಗೊತ್ತಿದೆ. ಬಿಜೆಪಿಗರಿಗಾಗಿ ಹತ್ತಾರು ಪರಪ್ಪನ ಅಗ್ರಹಾರ ಕಟ್ಟಬೇಕಾಗುತ್ತದೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಪಕ್ಷದ ಬಗ್ಗೆ ಚಿಂತೆ ಏಕೆ? ನಾನು ಎಲ್ಲೂ ಸಹ ಬಿಜೆಪಿ-ಕಾಂಗ್ರೆಸ್ ಪಕ್ಷಗಳಿಗೆ ವೋಟ್ ಹಾಕ್ಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿಕೆ  ವಾಗ್ದಾಳಿ ನಡೆಸಿದರು.

ಹೆಚ್.ಡಿ ದೇವೇಗೌಡರಿಗೆ ರಾಮನಗರದಲ್ಲಿ ಗೌರವ ಕೊಟ್ಟಿದ್ದೇನೆ ಎಂದು ಡಿಕೆ ಬ್ರದರ್ಸ್ ಹೇಳಿಕೊಂಡಿದ್ದಾರೆ. ದೇವೇಗೌಡರನ್ನ ಸೋಲಿಸಲೇಬೇಕು ಎಂದು ರಾಮನಗರದಲ್ಲಿ ಏನೆಲ್ಲಾ ಪ್ರಯತ್ನ ಮಾಡಿದ್ರು ಎಲ್ಲರಿಗೂ ಗೊತ್ತಿದೆ ಎಂದು ಟಾಂಗ್ ನೀಡಿದರು.

Key words: mysore-hd kumaraswamy-siddaramaiah