ದಸರಾ ಗಜಪಡೆಗೆ ಸಾಂಪ್ರದಾಯಿಕ ವಿದಾಯ: ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಕ್ಯಾಪ್ಟನ್ ಅರ್ಜುನ ಅಂಡ್ ಟೀಂ…

ಮೈಸೂರು,ಅ,10,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಯಶಸ್ವಿಗೊಳಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ದಸರಾ ಗಜಪಡೆ ಇದೀಗ ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದೆ.

ಈ ಬಾರಿ ದಸರಾ ಯಶಸ್ವಿಗೊಳಿಸಿದ ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಿಳ್ಕೋಡುಗೆ ಕೊಡಲಾಯಿತು. ಕೇವಲ ಅರಣ್ಯಾಧಿಕಾರಿಗಳು ಹಾಗೂ ಅರಮನೆ ಮಂಡಳಿ ಅಧಿಕಾರಿಗಳು ದಸರಾ ಗಜಪಡೆ ಆನೆಗಳಿಗೆ ಬಿಳ್ಕೋಡುಗೆ ಕೊಟ್ಟರು.

ಗಜಪಯಣ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಪೂಜೆ ಪುಷ್ಪರ್ಚನೆ ಮಾಡಿದ್ದ ಜನಪ್ರತಿನಿಧಿಗಳು‌ ಇದೀಗ ಆನೆ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇನ್ನು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಗೈರಾಗಿದ್ದರು.

ಆನೆಗಳನ್ನ ಲಾರಿಯಲ್ಲಿ  ರವಾನಿಸಲಾಗುತ್ತಿದ್ದು ನಾಡಿನಿಂದ ಹೊರಟ ಆನೆಗಳಿಗೆ ಮೈಸೂರು ಜನರು ಭಾವನಾತ್ಮಕ ವಿದಾಯ ಹೇಳಿದರು. ರಸ್ತೆಯಲ್ಲಿದ್ದ ಜನರೇಲ್ಲರೂ ಕೈಬಿಸಿ ಆನೆಗಳಿಗೆ ಅಭಿನಂದನೆ ಸಲ್ಲಿಸಿದರು.

ಅರಮನೆ ಬಿಟ್ಟು ತೆರಳಲು ಒಲ್ಲದ ಲಕ್ಷ್ಮಿ ಹಾಗೂ ಈಶ್ವರ ಆನೆ…

ಕಳೆದ ಒಂದು ತಿಂಗಳಿನಿಂದ ಮೈಸೂರಿ ಅರಮನೆಯಲ್ಲಿ ಬೀಡುಬಿಟ್ಟು ತಾಲೀಮಿನಲ್ಲಿ ಪಾಲ್ಗೊಂಡು ನಂತರ ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನ ಜತೆ ಹೆಜ್ಜೆ ಹಾಕಿದ್ದ ಲಕ್ಷ್ಮಿ ಹಾಗೂ ಈಶ್ವರ ಆನೆಗಳು ಇದೀಗ ಅರಮನೆ ಬಿಟ್ಟು ಕಾಡಿಗೆ ತೆರಳಲು ಹಿಂದೇಟು ಹಾಕಿದವು.

ಲಾರಿ ಹತ್ತಿಸಲು ಮಾವುತರು ಮತ್ತು ಕಾವಡುಗಳ ಹರಸಾಹಸ ಪಟ್ಟರೂ  ಅರಮನೆ ಭಾವನಾತ್ಮಕ ಸಂಬಂಧ ತೊರೆದು ಹೋಗಲು ಲಕ್ಷ್ಮೀ ಆನೆ ಹಿಂದೇಟು ಹಾಕಿತು.  ಸುಮಾರು 45 ನಿಮಿಷಗಳ ಸತತ ಪ್ರಯತ್ನ ಪಟ್ಟರೂ ಲಕ್ಷ್ಮೀ ಆನೆ ಲಾರಿ ಮೇಲಕ್ಕೆ ಏರದೆ ಈಜುಕೊಳದತ್ತ ದೌಡಾಯಿಸಿತು.  ಇನ್ನು  ಗೋಪಿ ಆನೆ ಸಾಹಯದಿಂದ ಲಾರಿ ಹತ್ತಿಸಲು ಮಾವುತರು ಮುಂದಾದರು. ಅರ್ಧ ಗಂಟೆ ಬಳಿಕ ಈಶ್ವರ ಆನೆಯನ್ನ ಲಾರಿ ಮೇಲಕ್ಕೆ ಏರಿಸಲಾಯಿತು. ಲಕ್ಷ್ಮೀ ಆನೆಯನ್ನು ಲಾರಿಗೆ ಹತ್ತಿಸಲು ಗೋಪಿ ಜೊತೆ ವಿಕ್ರಮ ಆನೆ ಎಂಟ್ರಿ ಕೊಟ್ಟರೂ ಎರಡೂ ಅನೆಗಳಿಗೂ ಲಕ್ಷ್ಮೀ ಬಗ್ಗಲ್ಲಿಲ್ಲ.

ಕಾಡುತ್ತಿದೆ ಅಭಿಮನ್ಯು ಅನುಪಸ್ಥಿತಿ..

ಟ್ರಬಲ್ ಶೂಟರ್ ಅಭಿಮನ್ಯು ಇಲ್ಲದೆ ಲಕ್ಷ್ಮೀ ಆನೆಯನ್ನ ಲಾರಿಗೆ ಹತ್ತಿಸಲು ವಾವುತ ಮತ್ತು ಕಾವಡಿಗಳು. ಪರದಾಡಿದ್ದು ಈವೇಳೆ ಅಭಿಮನ್ಯು ಅನುಪಸ್ಥಿತಿ ಕಾಡಿತು. ಅಭಿಮನ್ಯು ನಿನ್ನೆಯೇ ಹುಲಿ ಕಾರ್ಯಾಚರಣೆಗೆ  ತೆರಳಿದೆ.  ಬೇರೆ ಆನೆ ಲಾರಿ ಹತ್ತದೆ ಇದ್ದಾಗ ಅಭಿಮನ್ಯು ಎಂಟ್ರಿ ಕೊಡುತ್ತಿದ್ದನು.

Key words: mysore dasara- Captain Arjuna – Team- travel  – traditional- farewell