ಕಾಂಗ್ರೆಸ್ ಪಾದಯಾತ್ರೆ ಸಮರ್ಥಿಸಿಕೊಂಡ  ಶಾಸಕ ಜಿಟಿ ದೇವೇಗೌಡ.

ಮೈಸೂರು,ಜನವರಿ,10,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ.

ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಪಕ್ಷಾತೀತವಾಗಿ ಪಾದಯಾತ್ರೆ ಮಾಡ್ತಿದ್ದೀವಿ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಎಲ್ಲರಿಗೂ ಆಹ್ವಾನ ನೀಡಿ ಪಾದಯಾತ್ರೆ ಮಾಡ್ತಿದ್ದಾರೆ. ತ್ವರಿತವಾಗಿ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಅವಶ್ಯಕ ಎಂದು ಪಾದಯಾತ್ರೆ ಸಮರ್ಥಿಸಿಕೊಂಡರು.

ಮೇಕೆದಾಟು ಕೇವಲ ಕಾಂಗ್ರೆಸ್ ನವರಿಗೆ ಮಾತ್ರವಲ್ಲ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲರಿಗೂ ಬೇಕು. ರಾಜ್ಯಕ್ಕೆ ಕುಡಿಯುವ ನೀರು ಅತ್ಯಾವಶ್ಯಕ. ಇದರಲ್ಲಿ ರಾಜಕೀಯ ಮಾಡೋಕೆ ಇನ್ನೂ ಚುನಾವಣೆ ಒಂದೂವರೆ ವರ್ಷ ಇದೆ. ಕಾಂಗ್ರೆಸ್ ನಾಯಕರು ಒಟ್ಟಾಗಿ ಸೇರಿ ಪಾದಯಾತ್ರೆ ಮಾಡ್ತಿದ್ದಾರೆ. ರಾಜ್ಯ ಸರ್ಕಾರ ಕೂಡಾ ಪಾದಯಾತ್ರೆ ತಡೆದಿಲ್ಲ. ತ್ವರಿತವಾಗಿ ಯೋಜನೆ ಜಾರಿ ಆಗ್ಬೇಕು ಅನ್ನೋದು ನಮ್ಮ ಆಶಯ ಎಂದು ಜಿ.ಟಿ ದೇವೇಗೌಡರು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಹೆಚ್ವಳ ವಾಗ್ತಿದೆ. ಈಗಾಗಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಮತ್ತಷ್ಟು ಸಿದ್ದತೆ ಮಾಡಿಕೊಳ್ಳುತ್ತೇವೆ. ಕಳೆದ ಬಾರಿಯಂತೆ ಕೋವಿಡ್ ಸೆಂಟರ್ ಗಳ ನಿರ್ಮಾಣ ಮಾಡಲಾಗುತ್ತೆ. ಬೆಡ್ ಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಅಲ್ಲದೇ ಇಂದಿನಿಂದ ಬೂಸ್ಟರ್ ಡೋಸ್ ಕೂಡಾ ನೀಡಲಾಗ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮರ್ಥವಾಗಿ ಕೋವಿಡ್ ನಿರ್ವಹಿಸಲಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

Key words: MLA- GT Deve Gowda- defended – Congress-padayatra