ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಗೆ ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ ಸಮರ್ಪಣೆ.

ಮೈಸೂರು, ಜೂನ್ 22,2022(www.justkannada.in):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಯೋಗ ಕಾರ್ಯಕ್ರಮ ಅತ್ಯಂತ ಅವಿಸ್ಮರಣೀಯವಾದುದು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯಶಸ್ಸಿಗೆ ಕಾರಣೀಭೂತರಾದ ಯೋಗಪಟುಗಳು, ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಚಿವ ಎಸ್.ಟಿ ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಿಷ್ಟು…

ಮಾನವೀಯತೆಗಾಗಿ ಯೋಗ ಧ್ಯೇಯದೊಂದಿಗೆ ದೇಶ-ವಿದೇಶಗಳಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಮೈಸೂರಿನ ಅರಮನೆ ಮೈದಾನದಲ್ಲಿ ಸಾರ್ವಜನಿಕರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗಾಸನ ಪ್ರದರ್ಶನದಿಂದ ಯೋಗ ದಿನಕ್ಕೆ ಸ್ಪೂರ್ತಿಯಾಗಿದೆ. 1 ಗಂಟೆ 15 ನಿಮಿಷಗಳ ಯೋಗ ಕಾರ್ಯಕ್ರಮದಲ್ಲಿ 15 ಸಾವಿರ ಜನ ಪಾಲ್ಗೊಂಡಿದ್ದರು.  14 ಸಾವಿರ ಜನರಿಗೆ ಕ್ಯೂ ಆರ್ ಕೋಡ್ ಟಿಕೆಟ್ ಜನರೇಟ್ ಮಾಡಲಾಗಿತ್ತು. 15 ಸಾವಿರ ಮ್ಯಾಟ್ ಹಾಕಲಾಗಿತ್ತು. ಎಲ್ಲವೂ ಭರ್ತಿಯಾಗಿದ್ದವು. ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ನಾನಾ ಜಿಲ್ಲೆಗಳು ಹಾಗೂ ದೆಹಲಿಯ ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗದಿಂದ ಕೂಡ ಆಗಮಿಸಿದ್ದರು

ಪ್ರಧಾನಮಂತ್ರಿ ಅವರ ಯೋಗ ಕಾರ್ಯಕ್ರಮವು ‘ಒಂದು ಸೂರ್ಯ, ಒಂದು ಭೂಮಿ’ ಪರಿಕಲ್ಪನೆಯನ್ನು ಒತ್ತಿಹೇಳುವ ‘ಗಾರ್ಡಿಯನ್ ಯೋಗ ರಿಂಗ್’ ಎಂಬ ನವೀನ ಕಾರ್ಯಕ್ರಮದ ಭಾಗವಾಗಿತ್ತು. 79 ದೇಶಗಳು, ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ನಡುವಿನ ಸಹಯೋಗದ ವ್ಯಾಯಾಮವಾಗಿತ್ತು. ಜೂನ್ 5, 11 ಮತ್ತು 19 ರಂದು ಯೋಗ ತಾಲೀಮು ನಡೆಸಲಾಗಿತ್ತು. ವಿಶೇಷಚೇತನರು, ತೃತೀಯ ಲಿಂಗಿಗಳು, ಪೌರ ಕಾರ್ಮಿಕರು, ಶಿಕ್ಷಕರು ಸೇರಿದಂತೆ 51 ವಿವಿಧ ವರ್ಗದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಯೋಗ ಮಾಡಿದರು. ಯೋಗಪಟುಗಳನ್ನು ಕರೆತರಲು 140ಕ್ಕೂ ಅಧಿಕ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಯೋಗ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮ್ಯಾಟ್, ಮೊಬೈಲ್ ಪೌಚ್ ನೀಡಲಾಯಿತು. ಜೊತೆಗೆ ಉಪಾಹರದ ವ್ಯವಸ್ಥೆ ಮಾಡಲಾಗಿತ್ತು.  10 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಒಟ್ಟು 17 ಬ್ಲಾಕ್ ಗಳನ್ನು ಮಾಡಲಾಗಿತ್ತು. 17 ಸಾವಿರ ಜನರಿಗಾಗವಷ್ಟು ಸ್ಥಳವಕಾಶ ಕಲ್ಪಿಸಲಾಗಿತ್ತು.  ಪ್ರತಿ ಬ್ಲಾಕ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಪ್ರಧಾನಮಂತ್ರಿಗಳು ಸಂಚರಿಸುವ ರಸ್ತೆಗಳಲ್ಲಿ ಮಾಡಿದ್ದ ದೀಪಾಲಂಕಾರ ದಸರಾ ನೆನಪಿಸುವಂತಿತ್ತು. ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಯೋಗಕ್ಕೆ ಸಂಬಂಧಿಸಿದ ಆಯುಷ್ ಪ್ರದರ್ಶನದ ಡಿಜಿಟಲ್ ಮಳಿಗೆಗಳು ಗಮನ ಸೆಳೆದವು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ 480 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ ನಾಗನಹಳ್ಳಿ ರೈಲು ನಿಲ್ದಾಣದಲ್ಲಿ ಉಪನಗರ ಸಂಚಾರಕ್ಕಾಗಿ ಕೋಚಿಂಗ್ ಟರ್ಮಿನಲ್‌ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. 155.49 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಉದ್ಘಾಟನೆ. ಪ್ರಧಾನಿಯವರ ಎಲ್ಲ ಕಾರ್ಯಕ್ರಮಕ್ಕೆ ಎಲ್ಲಾ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಂವಾದ ಸಾಕಷ್ಟು ಮೆಚ್ಚುಗೆ ಗಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಎಲ್ಲಾ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಚತೆ, ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರೂಪಿಸುವಲ್ಲಿ ,ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್‌, ಸೇರಿದಂತೆ ಆಯುಷ್ ಇಲಾಖೆ, ಶ್ರಮವಹಿಸಿ ಕೆಲಸ ಮಾಡಿದೆ. ಮಾಧ್ಯಮ ಮಿತ್ರರು ಸಾಕಷ್ಟು ಪ್ರಚಾರ ನೀಡಿದ್ದರ ಪರಿಣಾಮ ಯೋಗ ಕಾರ್ಯಕ್ರಮ ವಿಶ್ವದೆಲ್ಲೆಡೆ ಗಮನ ಸೆಳೆಯಿತು. ಮೈಸೂರಿನ ಜನತೆಯ ಸಹಕಾರ ಕೂಡ ಮರೆಯಲಾರದ್ದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಂಡ ಯೋಗ ಕಾರ್ಯಕ್ರಮ ಯಶಸ್ವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಎಸ್.ಟಿ ಸೋಮಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಚಂದ್ರಗುಪ್ತ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ  ನಾನಾ ನಿಗಮ ಮಂಡಳಿ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister -ST Somashekhar -thanks -success -World Yoga Day -Program