‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಭಾಜನರಾದ ಮಾಜಿ ಸಿಎಂ ಬಿಎಸ್ ವೈಗೆ ಅಭಿನಂದನೆ ಸಲ್ಲಿಸಿದ ಸಚಿವ ಎಸ್.ಟಿ ಸೋಮಶೇಖರ್.

ಬೆಂಗಳೂರು,ಸೆಪ್ಟಂಬರ್,25,2021(www.justkannada.in): ‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಪಾತ್ರರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.

ಹುಟ್ಟು ಹೋರಾಟಗಾರರಾದ, ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಿರಿಯ ಸದಸ್ಯರಿಗೆ ಮಾರ್ಗದರ್ಶಕರಾಗಿ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಪ್ರಪ್ರಥಮ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ನೀಡಿರುವುದು ಸಂತಸದ ಸಂಗತಿ. ಹೋರಾಟದ ಮೂಲಕ ಬೂಕನಕೆರೆಯಿಂದ ವಿಧಾನಸೌಧದವರೆಗೆ, ಪುರಸಭೆಯಿಂದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಯಡಿಯೂರಪ್ಪ ಅವರ ದಣಿವರಿಯದ ಹೋರಾಟದ ಬದುಕಿಗೆ ಈ ಪ್ರಶಸ್ತಿ ಮತ್ತೊಂದು ಸಾಕ್ಷಿಯಾಗಿದೆ ಎಂದು ಎಸ್ ಟಿ ಸೋಮಶೇಖರ್ ನುಡಿದಿದ್ದಾರೆ.

ರೈತ ನಾಯಕರಾಗಿ, ಹೋರಾಟಗಾರರಾಗಿ 8 ಬಾರಿ ಶಾಸಕರಾಗಿ, 4 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನತೆಯ ಮನಗೆದ್ದಿರುವ ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಪರಿಶ್ರಮದ ಫಲವಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ನೆಲೆಯೂರಲು ಸಾಧ್ಯವಾಯಿತು. ಇಂತಹ ಮಹಾನ್ ನಾಯಕರ ಸಲಹೆ, ಸೂಚನೆಗಳು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ. ರಾಜ್ಯ ವಿಧಾನಸಭೆಯ ಇತಿಹಾಸದಲ್ಲಿ ಮೊದಲಬಾರಿಗೆ ‘ಅತ್ಯುತ್ತಮ ಶಾಸಕ’ ಪ್ರಶಸ್ತಿಗೆ ಭಾಜನರಾದ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ತುಂಬುಹೃದಯದ ಅಭಿನಂದನೆಗಳನ್ನ ಸಲ್ಲಿಸುವುದಾಗಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

Key words: minister -ST Somashekhar- congratulates -former CM –BS yeddyurappa