ಗೋಡ್ಸೆ, ಸಾವರ್ಕರ್’ಗಿಂತ ಮಹಿಷ ಕೆಟ್ಟವನಾ?: ಪ್ರೊ.ನಂಜೇರಾಜ ಅರಸ್

ಮೈಸೂರು, ಸೆಪ್ಟೆಂಬರ್ 25, 2022 (www.justkannada.in): ಮಹಿಷ ದಸರಾ ಆಚರಣೆ ಮಾಡಬಾರದು ಎಂದು ಚಾಮುಂಡೇಶ‍್ವರಿ ಏನಾದ್ರು ಕಂಪ್ಲೇಟ್ ಕೊಟ್ರಿದ್ರಾ? ಸಾವರ್ಕರ್ ಫೋಟೋ ಹಾಕಿ ಗಣೇಶನ ಮೆರವಣಿಗೆ ಮಾಡ್ತಾರೆ. ಗೋಡ್ಸೆ ಫೋಟೋ ಇಟ್ಟು ಮೆರವಣಿಗೆ ಮಾಡ್ತಾರೆ. ಮಹಿಷ ಅವರಿಗಿಂತ ಕೆಟ್ಟವನ? ಎಂದು ಇತಿಹಾಸ ತಜ್ಞ ಪ್ರೊ. ನಂಜೇರಾಜ ಅರಸ್ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಷ ದಸರಾ ಆಚರಣೆಗೆ ಅವಕಾಶ ನೀಡದ ಜಿಲ್ಲಾಡಳಿತ ಹಾಗೂ ಪೊಲೀಸರ ನಡೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.  ಮಹಿಸೂರು ಎಂದು ಹಿಂದಿನ ರಾಜರು ಪತ್ರಗಳಲ್ಲಿ ನಮೂದು ಮಾಡುತ್ತಿದ್ದರು. ಆದರೀಗ  ಪುರಾಣದ ಕಥೆ ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಚಾಮುಂಡಿ ಕಾಲ್ಪನಿಕ. ಮಕ್ಕಳಿಗೆ ಹೇಳುವ ಚಂದಮಾಮ ಕತೆ ಇದ್ದಂಗೆ. ಕಾಲ್ಪನಿಕ ವ್ಯಕ್ತಿ ಜೀವಂತ ವ್ಯಕ್ತಿಯನ್ನ ಹೇಗೆ ಕೊಲ್ಲಲು ಸಾಧ್ಯ. ಸುರ ಅಂದ್ರೆ ಶೋಕಿ ಮಾಡಿ ಕಾಲ ಕಳೆಯುವವರು. ಅಸುರ ಅಂದ್ರೆ ಅ+ಸುರು, ಪ್ರಾಣವನ್ನ ಯಾರು ರಕ್ಷಿಸುತ್ತಾರೋ ಅವರು ಅಸುರ. ಸುರ’ನಲ್ಲದವನು ಅಸುರ. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವನಿಗೆ ಇಲ್ಲಿನ ಬಗ್ಗೆ ಏನು ಗೊತ್ತು ಎಂದು ಪಶ್ನಿಸಿದರು.

ಇಲ್ಲಿನ ಎಂಪಿ ಮೋದಿ ಬಗ್ಗೆ ಪುಸ್ತಕ ಬರೆದು ಅಧಿಕಾರ ಗಿಟ್ಟಿಸಿಕೊಳ್ಳುತ್ತಾನೆ. ಎಂಪಿ, ಚಾಮುಂಡಿ ಕುರಿತ ಪುಸ್ತಕ ಓದಲಿ. ಗೋಡ್ಸೆ, ಸಾವರ್ಕರ್ ಗಿಂತ ಮಹಿಷ ಕೆಟ್ಟವನ..? ಬರುವ ವರ್ಷ ಬಿಜೆಪಿ ಅಧಿಕಾರಕ್ಕೆ ಬರಬಾರದು. ಬೇರೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅದ್ದೂರಿ ಮಹಿಷ ದಸರಾ ಆಚರಣೆ ಮಾಡುತ್ತೇವೆ ಎಂದು ತಿಳಿಸಿದರು.