ಸ್ವಾತಂತ್ರ್ಯೋತ್ಸವದ ಉಡುಗೊರೆ: ಬಿಎಂಟಿಸಿ ಬಸ್ಸುಗಳಲ್ಲಿ ಎಲ್ಲರಿಗೂ ಒಂದು ದಿನ ಉಚಿತ ಪ್ರಯಾಣ.

ಬೆಂಗಳೂರು, ಆಗಸ್ಟ್ 12, 2022(www.justkannada.in): ಬಿಎಂಟಿಸಿ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಧಲ್ಲಿ ನಾಗರಿಕಸ್ನೇಹಿ ಪ್ರಯತ್ನವೊಂದನ್ನು ರೂಪಿಸಿದೆ. ಬಿಎಂಟಿಸಿ ಜನರಿಗೆ ಆಗಸ್ಟ್ 15ರಂದು ಒಂದು ದಿನದ ಮಟ್ಟಿಗೆ ತಮ್ಮ ವಾಹನಗಳನ್ನು ಬಿಟ್ಟು ಬಿಎಂಟಿಸಿ ಬಸ್ಸುಗಳಲ್ಲಿ ಸಂಚರಿಸುವಂತೆ ಕೋರಿದೆ, ಅದೂ ಉಚಿತವಾಗಿ..! ಜನರನ್ನು ಸಾರ್ವಜನಿಕ ಸಾರಿಗೆಗೆ ಹೊರಳುವಂತೆ ಪ್ರೋತ್ಸಾಹಿಸುವುದು ಅದರ ಉದ್ದೇಶವಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಈ ಉಚಿತ ಪ್ರಯಾಣದ ಉಪಕ್ರಮವನ್ನು ಬಿಎಂಟಿಸಿಯ ಸಿಲ್ವರ್ ಜ್ಯೂಬಿಲಿ ಆಚರಣೆಯ ಅಂಗವಾಗಿ ಆಯೋಜಿಸಲಾಗಿದ್ದು, ಹೆಚ್ಚಿನ ಜನರಿಗೆ ಸ್ವಾತಂತ್ರ್ಯೋತ್ಸವ ಆಚರಣೆಯ ಅನುಭವವನ್ನು ಒದಗಿಸುವುದು ಹಾಗೂ ಉಚಿತವಾಗಿ ಬಸ್ಸುಗಳಲ್ಲಿ ಸವಾರಿ ಮಾಡಿಸುವ ಗುರಿಯನ್ನು ಹೊಂದಿದೆ.

ಈ ಸಂಬಂಧ ಮಾತನಾಡಿದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಅವರು, “ಬಸ್ಸುಗಳು ಎಲ್ಲರಿಗೂ ಅತ್ಯಂತ ಸುರಕ್ಷಿತ ಹಾಗೂ ಸುಭದ್ರವಾದ ಪ್ರಯಾಣದ ಅನುಭವವನ್ನು ಕಲ್ಪಿಸುತ್ತದೆ. ವಿವಿಧ ಕಾರಣಗಳಿಂದಾಗಿ ಬಿಎಂಟಿಸಿ ಬಸ್ಸುಗಳನ್ನೇ ಹತ್ತದಿರುವಂತಹ ಜನರಿದ್ದಾರೆ. ಉದಾಹರಣೆಗೆ, ದಿನನಿತ್ಯ ಓಡಾಡುವವರು ವೋಲ್ವೊ ಬಸ್ಸಿನಲ್ಲಿ ಮಾಡಿರುವ ಅನುಭವ ಪಡೆದಿಲ್ಲದಿರಬಹುದು. ನಮಗೆ ನಮ್ಮ ಬಸ್ಸುಗಳನ್ನು ಹೆಚ್ಚು ಜನಪ್ರಿಯ ಸಾರಿಗೆ ಮಾದರಿಯನ್ನಾಗಿಸುವುದು ಮುಖ್ಯವಾಗಿದೆ,” ಎಂದು ವಿವರಿಸಿದರು.

೨೦೧೩-೧೪ರಲ್ಲಿ ಪ್ರತಿನಿತ್ಯ ೫೦ ಲಕ್ಷ ಪ್ರಯಾಣಿಕರು ಬಿಎಂಟಿಸಿ ಬಸ್ಸುಗಳನ್ನು ಉಪಯೋಗಿಸುತ್ತಿದ್ದರು. ಆದರೆ ಈ ಸಂಖ್ಯೆ ೨೦೨೨-೨೩ರ ಎರಡು ತ್ರೈಮಾಸಿಕ ಅವಧಿಗಳ ಒಳಗೆ ೨೭ ಲಕ್ಷಕ್ಕೆ ಇಳಿದಿದೆ. ಕಳೆದ ವರ್ಷ ಲಾಕ್‌ ಡೌನ್ ನಲ್ಲಿ ಈ ಸಂಖ್ಯೆ ೧೫-೨೦ ಲಕ್ಷಕ್ಕೆ ಇಳಿದಿತ್ತು. ಅದಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಸ್ವಲ್ಪ ಸುಧಾರಣೆಯಾಗಿದೆ. ಆದರೆ ಬಸ್ಸುಗಳ ಸಂಪೂರ್ಣ ಸೇವೆಗಳನ್ನು ಎಲ್ಲರಿಗೂ ತಲುಪಿಸುವುದು ಅಧಿಕಾರಿಗಳ ಅಪೇಕ್ಷೆಯಾಗಿದೆ.

ವೇತನ ಹಾಗೂ ಇಂಧನದ ವೆಚ್ಚಗಳು ಬಹಳ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳು ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸಲು ಸರ್ಕಾರದ ಮೇಲೆ ಹೆಚ್ಚು ಅವಲಂಭಿತವಾಗುವಂತಾಗಿದೆ. ಜೊತೆಗೆ ಬಿಎಂಟಿಸಿ ೨,೦೦೦ ಚಾಲಕರ ಕೊರತೆಯನ್ನೂ ಎದುರಿಸುತ್ತಿದೆ.

ಸರ್ಕಾರ-ನೇಮಕ ಮಾಡಿರುವ ಸಮಿತಿಯ ಮುಖ್ಯಸ್ಥರು ಒಳಗೊಂಡಂತೆ ಹಾಗೂ ಕಾರ್ಯಕತರು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು ಹಾಗೂ ಅದರ ಹಿತಾಸಕ್ತಿಯಲ್ಲಿ ಸಾರಿಗೆ ನಿಗಮಗಳಿಗೆ ಹಣವನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

“ವಾಸ್ತವದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬೆಂಗಳೂರಿನಲ್ಲಿ ಅನೇಕರು ಇಷ್ಟಪಡುವುದಿಲ್ಲ. ಜನರು ಖಾಸಗಿ ವಾಹನಗಳ ಮೇಲೆ ಹೆಚ್ಚು ಅವಲಂಭಿತರಾಗುವುದನ್ನು ಕಡಿಮೆಗೊಳಿಸುವುದು ಬೆಂಗಳೂರಿನ ಬಹಳ ದೊಡ್ಡ ಸಮಸ್ಯೆಯಾಗಿದೆ. ಬಸ್ಸುಗಳು ಹಾಗೂ ಇತರೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಸುರಕ್ಷಿತ, ಕೈಗೆಟಕುವಂತೆ ಮಾಡುವುದು ಬೆಂಗಳೂರು ಮಹಾನಗರವನ್ನು ಹೆಚ್ಚು ಜೀವಿಸಬಲ್ಲ ನಗರವನ್ನಾಗಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿದೆ,” ಎನ್ನುವುದು ಜನಾಗೃಹದ ನಾಗರಿಕ ಭಾಗವಹಿಸುವಿಕೆ ವಿಭಾದ ಮುಖ್ಯಸ್ಥ ಶ್ರೀನಿವಾಸ್ ಅಲವಳ್ಳಿಯವರ ಅಭಿಪ್ರಾಯವಾಗಿದೆ.

೭೫ ಹೊಸ ಇ-ಬಸ್ಸುಗಳು

ಬಿಎಂಟಿಸಿ ೭೫ ಹೊಸ ವಿದ್ಯುತ್ ಬಸ್ಸುಗಳನ್ನು ಸೇರ್ಪಡೆಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಹಣಕಾಸು ಸಹಾಯದೊಂದಿಗೆ ಖರೀದಿಸಿರುವ ಈ ದೊಡ್ಡ ಗಾತ್ರದ (೧೨ ಮೀ. ಉದ್ದ) ಇ-ಬಸ್ಸುಗಳ ಸೇವೆಗಳನ್ನು ಯಲಹಂಕದಿಂದ ಆರಂಭಿಸಲಾಗುವುದು. ಕೆಂಪೇಗೌಡ ಮೆಟ್ರೊ ನಿಲ್ದಾಣದಲ್ಲಿ ವೇಗದ ಚಾರ್ಜಿಂಗ್ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಬಿಎಂಟಿಸಿ ಬಸ್ಸುಗಳ ಗುಂಪಿಗೆ ಈ ಇ-ಬಸ್ಸುಗಳನ್ನು ಸೇರ್ಪಡೆಗೊಳಿಸಲು ಬಿಎಂಟಿಸಿ ಅಧಿಕಾರಿಗಳು ಯೋಜಿಸಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Independence Day-Gift-One day- free- travel – BMTC -buses.