ರಾಮನಗರದಲ್ಲಿ ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಹೈಡ್ರಾಮಾ: ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ.

ರಾಮನಗರ,ಮಾರ್ಚ್,2,2023(www.justkannada.in):  ರಾಮನಗರದಲ್ಲಿ ಮತ್ತೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹಗ್ಗಜಗ್ಗಾಟ ಮುಂದುವರೆದಿದ್ದು ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಹೈಡ್ರಾಮಾ ನಡೆದಿದೆ.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಬರುವ ಮುನ್ನವೇ  ಸಚಿವ ಸುಧಾಕರ್ ಜಿಲ್ಲಾಸ್ಪತ್ರೆ ಉದ್ಘಾಟಿಸಿದ್ದರು. ಬಿಜೆಪಿಯ ಈ ನಡೆಗೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದು ತಳ್ಳಾಟ ನೂಕಾಟ ನಡೆದಿದೆ ಎನ್ನಲಾಗಿದೆ.

ಹಾಗೆಯೇ ಪರಸ್ಪರ ಘೋಷಣೆ ಕೂಗಿದ್ದು, ಪೊಲೀಸರ ಜೊತೆ ಜೆಡಿಎಸ್ ಕಾರ್ಯಕರ್ತರು ವಾಗ್ವಾದ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,ಆಸ್ಪತ್ರೆ ಉದ್ಘಾಟಿಸಲು ಸಚಿವರಿಗೆ ನಾನೇ ಹೇಳಿದ್ದೆ. ಆದರೆ ಕಾರ್ಯಕರ್ತರು ಗೊಂದಲ ಮಾಡಿಕೊಂಡಿದ್ದಾರೆ.  ಆಸ್ಪತ್ರೆ ಉದ್ಘಾಟನೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ಆಸ್ಪತ್ರೆ ಉದ್ಘಾಟನೆ ಒಳ್ಳೆಯ ಕಾರ್ಯಕ್ರಮ ಎಲ್ಲರೂ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

Key words: inauguration – district hospital – Ramanagara-Clash -between -BJP-JDS