ಅಭಿವೃದ್ಧಿ ಕಾಮಗಾರಿಗೆ ಹೆಚ್.ಡಿಕೆ ತಡೆಯೊಡ್ಡುತ್ತಿದ್ದಾರೆ- ಮಾಜಿ ಸಚಿವ ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ.

ರಾಮನಗರ,ಅಕ್ಟೋಬರ್,1,2022(www.justkannada.in):  ರಸ್ತೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕಾರಿಗೆ ಮೊಟ್ಟೆ ಮತ್ತು ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಕಾರಿಗೆ ಸುಮಾರು 500 ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದರು ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ್,  ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಿ ತಾಲ್ಲೂಕು ಅಭಿವೃದ್ಧಿಯಾಗಿಲ್ಲ. ಈಗ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುತ್ತಿದ್ದಾರೆ. ಕುಮಾರಸ್ವಾಮಿಗೆ ಇದು ಶೋಭೆ ತರುವುದಿಲ್ಲ.  ಹೆಚ್.ಡಿಕೆ ತರಾತುರಿಯಲ್ಲಿ  ಹಲವು ಕಾರ್ಯಕ್ರಮಗಳನ್ನ ಉದ್ಘಾಟಿಸಿದ್ದಾರೆ. ಶೀಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಜನರನ್ನ ಭಾವನಾತ್ಮಕವಾಗಿ ಎತ್ತು ಕಟ್ಟುವುದು ಸರಿಯಲ್ಲ. ಅವರ ಪ್ರಭಾವ ದಿನೇ ದಿನೇ ಕುಗ್ಗುತ್ತಿದೆ ಎಂದು ಟೀಕಿಸಿದರು.

ರಸ್ತೆ ಕಾಮಗಾರಿಗೆ ಸಿಎಂ 50 ಕೋಟಿ ಅನುದಾನ ಕೊಟ್ಟರು.  ಅಭಿವೃದ್ಧಿಗೆ ಸಹಕರಿಸಿ ಎಂದು ಹೆಚ್.ಡಿಕೆಗೆ ಮನವಿ ಮಾಡಿದ್ದೆ. ಅವರೇ ಅಧ್ಯಕ್ಷತೆ ವಹಿಸಬೇಕಿತ್ತು. 50 ಕೋಟಿ ಕಾಮಗಾರಿ ಪಾರದರ್ಶಕವಾಗಿದೆ ಎಂದರು.

Key words: HD Kumaraswamy -development work-  Former minister- CP Yogeshwar