ಹಳೇ ಮೈಸೂರು ಭಾಗಕ್ಕೆ ಕೊಡುಗೆ ಶೂನ್ಯ: ಸಂಸದ ಪ್ರತಾಪ್ ಸಿಂಹ ವಿರುದ್ದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ

kannada t-shirts

ಮೈಸೂರು,ಮಾ,5,2020(www.justkannada.in): ಸುಳ್ಳಿನ ಮೂಲಕವೇ ಬಂಡಲ್ ಬಿಡುವ ಸಂಸದ ಪ್ರತಾಪ್ ಸಿಂಹರವರೇ. ಇಂದಿನ ಬಜೆಟ್ ನಲ್ಲಿ ಮೈಸೂರಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ. ಎಲ್ಲಿ ನಿಮ್ಮ ಗ್ರೇಟರ್ ಮೈಸೂರು..? ಹೀಗೆ ಸಂಸದ ಪ್ರತಾಪ್ ಸಿಂಹ ವಿರುದ್ದ ಗುಡಗಿದ್ದು ಕೆಪಿಸಿಸಿ ವಕ್ತಾರ ಲಕ್ಷ್ಮಣ್….

ಮೈಸೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ  ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ನಗರದ ಸುಳ್ಳಿನ ಮೂಲಕವೇ ಬಂಡಲ್ ಬಿಡುವ ಸಂಸದ ಪ್ರತಾಪ್ ಸಿಂಹರವರೇ. ಇಂದಿನ ಬಜೆಟ್ ನಲ್ಲಿ ಮೈಸೂರಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ. ಹಳೇ ಮೈಸೂರು ಭಾಗಕ್ಕೆ ನಿಮ್ಮ ಕೊಡುಗೆ ಏನು..? ಹಳೇ ಮೈಸೂರು ಭಾಗಕ್ಕೆ ಬಿಜೆಪಿ ಕೊಡುಗೆ ಶೂನ್ಯ. ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ 3800 ಕೋಟಿಯಷ್ಟು  ಅನುದಾನವನ್ನು ಮೈಸೂರಿಗೆ ನೀಡಿದ್ದಾರೆ. 30 ಅಲ್ಲ 3 ಕೋಟಿ ಕೊಡುವ ಯೋಗ್ಯತೆ ಬಿಜೆಪಿಯವರಿಗಿಲ್ಲ ಎಂದು ಟೀಕಿಸಿದರು.

25-30 ವರ್ಷಗಳಿಂದ ಮೈಸೂರನ್ನು ಪಾರಂಪರಿಕ ನಗರವೆಂದು ಘೋಷಣೆ ಮಾಡಬೇಕೆಂದು ಎಲ್ಲರ ಒತ್ತಾಸೆಯಾಗಿತ್ತು. ಈಗಿನ ಸರ್ಕಾರದಿಂದಲೂ, ನಮ್ಮ ಸರ್ಕಾರದ ಕಾಲದಲ್ಲೂ ಆಗದಿರುವುದು ದುರಂತ. ಮೈಸೂರನ್ನು ಗ್ರೇಟರ್ ಮೈಸೂರು ಮಾಡುತ್ತೇವೆಂದು ಸೋಮಣ್ಣ, ಪ್ರತಾಪ್ ಸಿಂಹ ಹೇಳಿದ್ದಿರಿ. ಎಲ್ಲಿ ನಿಮ್ಮ ಗ್ರೇಟರ್ ಮೈಸೂರು..? ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪ್ರಶ್ನಿಸಿದರು.

ಹಾಗೆಯೇ ಪ್ರತಾಪ್ ಸಿಂಹ ಮಾತೆತ್ತಿದ್ದರೆ ಏರ್ ಪೋರ್ಟ್ ನಾವು ಮಾಡಿದ್ದು ಎಂದು ಬಡಾಯಿ ಕೊಚ್ಚುಕೊಳ್ಳುತ್ತಾರೆ. ಏರ್ ಪೋರ್ಟ್ ರನ್ ವೇ ಎಕ್ಸ್ಟೆನ್ಷನ್ ಮಾಡುತ್ತೇವೆಂದು ಹೇಳಿಕೆ ಬಿಟ್ಟರೇ ಬೇರೆ ಏನು ಮಾಡಿದ್ದೀರಿ‌. ಮೈಸೂರಿನಿಂದ ಕುಶಾಲನಗರಕ್ಕೆ ರೈಲು ತರುತ್ತೇವೆಂದು ಬರಿ ರೈಲು ಬಿಡುತ್ತಿದ್ದಾರೆ‌. ಮತ್ತೊಂದೆಡೆ ಜಿಟಿಡಿ ಹಳೇ ಉಂಡುವಾಡಿ ಯೋಜನೆ ಜಾರಿಗೆ ತರುತ್ತೇವೆ ತರುತ್ತೇವೆ ಎಂದು ಬುರುಡೆ ಬಿಡುತ್ತಿದ್ದಾರೆ. ಇನ್ನು ಕೆ. ಆರ್ ಕ್ಷೇತ್ರದ ಶಾಸಕ ರಾಮದಾಸ್ ತಾನು ಆ್ಯಕ್ಟೀವ್ ಎಂದು ಬಿಂಬಿಸಲು ಎಕ್ಸೆಲ್ ಪ್ಲಾಂಟ್ ಬಿಟ್ಟು ಆಚೆನೇ ಬರುತ್ತಿಲ್ಲ. ಇನ್ನು ಮಾನ್ಯ ಉಸ್ತುವಾರಿ ಸಚಿವರಂತೂ ಚಿನ್ನದ ರಥ ಮಾಡುಸುತ್ತೇನೆಂದು ಹೇಳಿ ರಾಜ್ಯದ ಜನತೆಗಯನ್ನ ಮೋಸ ಮಾಡಿದ್ದಾರೆ. ಇಂಥವರಿಂದ ಉತ್ತಮ ಬಜೆಟ್ ನಿರೀಕ್ಷಿಸಲು ಸಾಧ್ಯವೇ..ಈ ಬಾರಿಯ ಬಜೆಟ್ ಕೇವಲ ಬಿಬಿಎಂಪಿ ಬಜೆಟ್ ಆಗಿದೆ. ಬೆಂಗಳೂರಿನ ಜನರನ್ನು ಓಲೈಸಿಕೊಳ್ಳಲು ಮಾತ್ರವೇ ಈ ಬಜೆಟ್ ಮಂಡಿಸಲಾಗಿದೆ. ಇದು ಸುಳ್ಳು ಭರವಸೆಗಳ ರಾಜ್ಯ ಬಜೆಟ್‌ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್  ಟೀಕಿಸಿದರು.

ಇದು ಕೇವಲ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿಗೆ ಮಾತ್ರ ಸೀಮಿತವಾದ ಬಜೇಟ್‌- ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ

ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ,  ಈ ಬಾರಿ ಬಜೆಟ್ ನಲ್ಲಿ ಮೈಸೂರಿನ ಜನತೆಗೆ ಸಾಕಾಷ್ಟು ನಿರೀಕ್ಷೆ ಇತ್ತು. ಮೈಸೂರನ್ನು ಪಾರಂಪರಿಕ ನಗರವೆಂದು ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಇದು ಬಜೇಟ್ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ. ಮೈಸೂರಿನ ಜನರಿಗೆ ಬಿಜೆಪಿ ಕೊಡುಗೆ ಏನು ಇಲ್ಲಾ. ರೈತರ ಹೆಸರೇಳಿಕೊಂಡು ಹಸಿರು ಟವಲ್ ಹಾಕಿಕೊಂಡು ಅಧಿಕಾರಕ್ಕೆ ಬಂದ ನೀವು ರೈತರಿಗೆ ಏನು ಮಾಡಿದ್ದಿರಿ‌ ಎಂದು ಪ್ರಶ್ನಿಸಿದರು.

ಈ ಬಜೆಟ್ ಮಹಿಳೆಯರ, ರೈತರ, ಅಸಂಘಟಿತ ಕಾರ್ಮಿಕರ ವಿರುದ್ಧವಾಗಿದೆ. ಇದು ಕೇವಲ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿಗೆ ಮಾತ್ರ ಸೀಮಿತವಾದ ಬಜೇಟ್‌. ಕರ್ನಾಟಕದ ಮಂದಿ ಕರ್ನಾಟಕ ಸರ್ಕಾರದ ಬಜೆಟ್ ಎಂದು ನಿರೀಕ್ಷೆ ಮಾಡಬಾರದು ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ವ್ಯಂಗ್ಯವಾಡಿದರು.

Key words: Greater Mysore- gold chariot-  budget- KPCC spokesperson -Laxman -against -Pratap simha

website developers in mysore