‘ಜನರು ನೀರಿಲ್ಲ ಅಂದ್ರೆ ಅಮಾನತು ಗ್ಯಾರಂಟಿ’: ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಮಾಜಿ ಸಚಿವ ಜಿ.ಟಿ ದೇವೇಗೌಡ…

ಮೈಸೂರು,ಅ,21,2019(www.justkannada.in): ಕೆಆರ್ ಎಸ್ ತುಂಬಿ ಹರಿಯುತ್ತಿದ್ದರೂ ನೀರಿಲ್ಲ ಅಂದ್ರೆ ಏನು, ಜನ ನೀರಿಲ್ಲ ಅಂದ್ರೆ ಅಮಾನತು ಮಾಡೋದು ಗ್ಯಾರಂಟಿ ಎಂದು ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ  ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಯತೀಂದ್ರ ಸಿದ್ಧರಾಮಯ್ಯ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ಅಧಿಕಾರಿಗಳು ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮುಡಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ  ಮಾಜಿ ಸಚಿವ ಜಿ.ಟಿ ದೇವೇಗೌಡ, 5 ಕೋಟಿ ಕಾಮಗಾರಿ ನಡೆಸಲು ಎಷ್ಟು ದಿನ ಬೇಕು. ಮುಡಾದವರು ಮಾಡುವ ರಸ್ತೆ ಡಾಂಬರೀಕರಣ ಬರಿ ಕಳಪೆಯಾಗಿರುತ್ತೆ. ಮುಡಾದಲ್ಲಿ ಲ್ಯಾಂಡ್ ಅಕ್ವೇರ್ ಮಾಡ್ಕೊಂಡು, ಪ್ಲಾನ್ ಅಪ್ರೂವ್ ಮಾಡೋದ ಅಷ್ಟೆ ಕೆಲಸ ಏನ್ರಿ ಎಂದು ಹರಿಹಾಯ್ದರು.  ಗುಣಮಟ್ಟದ ಕಾಮಗಾರಿಗೆ ಎಂಜಿನಿಯರ್ ಗಳು ನಿಂತು ಮಾಡಿಸಬೇಕು. ಎಚ್ಚೆತ್ತುಕೊಳ್ಳದೆ ಹೋದರೆ ನಿಮಗೆ ತೊಂದರೆಯಾಗುತ್ತೆ ತಿಳ್ಕೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮಳೆ ಕಾರಣದಿಂದ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ, ಅದು ಮಂಡ್ಯ ಜಿಲ್ಲೆಗೆ ಬರುತ್ತೆ ಎಂದು ಹೇಳಿದ ಅಧಿಕಾರಿ ವಿರುದ್ದ ಗರಂ ಆದ  ಜಿಟಿಡಿ, ಅವ್ರ ಅಪ್ಪನದಾಗ್ಲಿ ನನಗೆ ಹೇಳ್ರಿ, ಮಂಡ್ಯಗೆ ಬೇರೆ ಸೆಸ್ಕಾಂ ಇದ್ಯೇನ್ರಿ, ಯಾರ್ರಿ ನಿಮಗೆ ಹೇಳಿದ್ದು  ಎಂದು ಅಧಿಕಾರಿಗಳನ್ನ ತರಾಟೆಗೆ ತೆಗದುಕೊಂಡರು.

ರಸ್ತೆ ಕಳಪೆ ಕಾಮಗಾರಿ ವಿಚಾರ ಸಂಬಂಧ ಗುತ್ತಿಗೆದಾರರಿಗೆ ಗುತ್ತಿಗೆದಾರರಿಗೆ  ಒಂದು ವರ್ಷದ ಷರತ್ತು ವಿಧಿಸಿ. ಒಂದು ವರ್ಷದಲ್ಲಿ ರಸ್ತೆ ಹಾಳಾದ್ರೆ ಹೊಸ ರಸ್ತೆ ಮಾಡ್ಸಿ. ಇಲ್ಲಾ ಅಂದ್ರೆ ಕಿತ್ತುಬಿಸಾಕಿ. ಒಂದು ವರ್ಷಕ್ಕೆ ರಸ್ತೆಗಳು ಹಾಳಗ್ತಾವೆ ಅಂದ್ರೆ ಇಂಜಿನಿಯರ್ಗಳು ಏನ್ ಮಾಡ್ತಾ ಇದೀರಾ  ಎಂದು ಜಿ.ಟಿ ದೇವೇಗೌಡರು  ಕಿಡಿಕಾರಿದರು.

Key words: Former minister GT Deve Gowda – meeting- officer-warned