ಪಕ್ಷದ ಕೆಲಸಕ್ಕೆ ಮೊದಲ ಆದ್ಯತೆ: ಪ್ರತಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡುವೆ- ಸಚಿವ ಎಸ್ ಟಿ  ಸೋಮಶೇಖರ್…

ಗದಗ,ಜೂ,20,2020(www.justkannada.in):  ನಾನು ಪ್ರತಿ ಜಿಲ್ಲೆಗೆ ಭೇಟಿ ಮಾಡುವಾಗ ನಮ್ಮ ಪಕ್ಷದ ಕಚೇರಿಗೆ ಭೇಟಿ ನೀಡಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದೇನೆ. ಪಕ್ಷದ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಇಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿದ ಬಳಿಕ ಮುಂದಿನ ಕಾರ್ಯಕ್ರಮಗಳಿಗೆ ಹೋಗುತ್ತೇನೆ. ಈಗಾಗಲೇ ನಾನು 17 ಜಿಲ್ಲಾ ಪ್ರವಾಸ ಕೈಗೊಂಡಿದ್ದು ಆ ಎಲ್ಲೆಡೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಸಚಿವ ಎಸ್ ಟಿ ಸೋಮಶೇಖರ್ ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು.  ಹಳ್ಳಿಯಿಂದ ದಿಲ್ಲಿಯವರೆಗೆ ಯಾವುದೇ ಒಂದು ಪಕ್ಷ ಅಧಿಕಾರ ಹಿಡಿಯಲು ಆ ಪಕ್ಷದ ಕಾರ್ಯಕರ್ತರೇ ಮುಖ್ಯ ಎಂದು  ಸಚಿವ ಎಸ್.ಟಿ ಸೋಮಶೇಖರ್ ಕಾರ್ಯಕರ್ತರ ಮಹತ್ವವನ್ನು ತಿಳಿಸಿದರು.

ಇನ್ನು ಆಶಾ ಕಾರ್ಯಕರ್ತೆಯರ ಕೆಲಸ ಗುರುತಿಸಿ ಪ್ರೋತ್ಸಾಹಧನ ಕೊಡಬೇಕು ಎಂದು ಘೋಷಿಸಿದಾಗ ಅದಕ್ಕೆ ತಗುಲುವ 12.7 ಕೋಟಿಯನ್ನು ನನ್ನ ಇಲಾಖೆಯಿಂದಲೇ ಭರಿಸುವುದಾಗಿ ಮುಖ್ಯಮಂತ್ರಿಗಳಿಗೆ ಮಾತು ಕೊಟ್ಟು ಅದರಂತೆ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಈ ಹಿನ್ನೆಲೆಯಲ್ಲಿ ಖುದ್ದು ನಾನೇ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಾಂಕೇತಿಕವಾಗಿ ಪ್ರೋತ್ಸಾಹದನ ಚೆಕ್ ವಿತರಣೆ ಮಾಡುತ್ತಿದ್ದೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

ನಮ್ಮ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಯಾವುದಾದರೂ ತೊಂದರೆಗಳಿದ್ದರೆ ಗಮನಕ್ಕೆ ತನ್ನಿ ಪರಿಹರಿಸಿ ಎಂದರಲ್ಲದೆ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೇಂದ್ರದಿಂದ ತರಲಾಗಿದೆ. ಆದರೆ ಕಾಯ್ದೆ ಬರುವುದಕ್ಕೆ ಮುಂಚೆಯೇ ವಿರೋಧ ಮಾಡುತ್ತಿದ್ದಾರೆ. ಆದರೆ, ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದ್ದರಿಂದ ಇದೊಂದು ಉತ್ತಮ ಕಾಯ್ದೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರ ಶಿಫಾರಸಿದ್ದರೆ ಸಹಕಾರ ಸಂಘಕ್ಕೆ ನಾಮಿನೇಶನ್ ….

ಸಹಕಾರ ಸಂಘಗಳಿಗೆ ಪಕ್ಷದ ಕಾರ್ಯಕರ್ತರನ್ನು ನಾಮಿನೇಶನ್ ಮಾಡುವ ಪ್ರಕ್ರಿಯೆಗೆ ಈಗಾಗಲೇ  ಚಾಲನೆ ನೀಡಲಾಗಿದೆ. ಆದರೆ, ಇದಕ್ಕೆ ಆಯಾ ಜಿಲ್ಲೆಗಳ ಪಕ್ಷದ  ಅಧ್ಯಕ್ಷರು ಹಾಗೂ ಶಾಸಕರು ಜಂಟಿಯಾಗಿ ಸೇರಿ ಹೆಸರನ್ನು ಶಿಫಾರಸು ಮಾಡಬೇಕು. ಯಾವ  ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲವೋ ಆ ಎಲ್ಲ ಕಡೆ ಜಿಲ್ಲಾಧ್ಯಕ್ಷರು  ಸೂಚಿಸಿದರೆ ಕೆಲಸ ಮಾಡಿಕೊಡಲಾಗುವುದು. ಆದರೆ, ಆ ಸಹಕಾರ ಸಂಘಗಳಲ್ಲಿ ಸರ್ಕಾರ ಷೇರು ಇರಬೇಕು ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಮಾತನಾಡಿ, ನಮ್ಮ ಪಕ್ಷಕ್ಕೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಬಂದಿದ್ದು ಬಲ ಸಿಕ್ಕಂತಾಗಿದೆ. ಅವರ ನೇತೃತ್ವದಲ್ಲಿ ಸಹಕಾರ ಇಲಾಖೆಯಲ್ಲಿ  ಉತ್ತಮ ಕೆಲಸಗಳಾಗಲಿ, ರೈತರಿಗೆ ಉತ್ತಮ ಯೋಜನೆಗಳಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೋಹನ್ ಮಾಳಶೆಟ್ಟಿ ಮಾತನಾಡಿ, ನಮ್ಮ ಪಕ್ಷದ ಚಟುವಟಿಕೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳುವ  ಅವರ ವ್ಯಕ್ತಿತ್ವ ದೊಡ್ಡದು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯವೈಖರಿಯೇ  ಬೇರೆ ಹಾಗೂ ಬಿಜೆಪಿಯ ಸಂಘಟನೆ ಪರಿಯೇ ಬೇರೆ. ಅಂತಹ ಪಕ್ಷದಿಂದ ಬಂದು ನಮ್ಮ ಜೊತೆ ನಮ್ಮವರಾಗಿ ಬೆರೆಯುವುದು ಅವರ ಉತ್ತಮ ಗುಣ ಎಂದು ಹೇಳಿದರು.  ಶಾಸಕರಾದ ರಾಮಣ್ಣ ಲಮಾಣಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶ್ರೀಪತಿ  ಉಡುಪ ಇದ್ದರು.

Key words: First priority – party work-BJP office  – Minister -ST Somashekhar-gadag