ಡಿ.ಕೆ.ರವಿ ಸಾವಿನ “ನಗ್ನ ಸತ್ಯ” ಅನಾವರಣಗೊಳಿಸಿದ ಸಿದ್ದರಾಮಯ್ಯ..!

ಬೆಂಗಳೂರು, ಅಕ್ಟೋಬರ್ 02, 2021: ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಕುರಿತು ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರು ಬರೆದಿರುವ “ನಗ್ನ ಸತ್ಯ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ, ಮಾತನಾಡಿದರು. ಅವರ ಭಾಷಣದ ಸಾರಾಂಶ ಇಂತಿದೆ:

ರಾಮಕೃಷ್ಣ ಉಪಾಧ್ಯ ಅವರು ಬಹಳ ದೀರ್ಘಕಾಲದಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಡಿ.ಕೆ ರವಿ ಅವರ ಆತ್ಮಹತ್ಯೆ ರೀತಿಯ ಹಲವಾರು ಘಟನೆಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಕಂಡಿದ್ದಾರೆ, ಅವುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಅನುಭವ ಇದೆ.

ರಾಮಕೃಷ್ಣ ಉಪಾಧ್ಯ ಅವರು ಡಿ.ಕೆ ರವಿ ಅವರ ಸಾವಿನ ಕುರಿತಾಗಿ ಲ್ಯಾಂಡ್, ಲಸ್ಟ್, ಅಂಡ್ ಆಡಿಯೋ ಟೇಪ್ ಎಂಬ ಇಂಗ್ಲಿಷ್ ಭಾಷೆಯಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಇದನ್ನು ಪ್ರಹ್ಲಾದ್ ರಾವ್ ಅವರು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಈ ಎರಡೂ ಪುಸ್ತಕಗಳು ಇಂದು ಏಕಕಾಲದಲ್ಲಿ ಲೋಕಾರ್ಪಣೆಗೊಂಡಿವೆ.

ಡಿ.ಕೆ ರವಿ ಅವರ ಆತ್ಮಹತ್ಯೆಗೆ ಕಾರಣಗಳೇನು ಎಂಬ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಈ ಪುಸ್ತಕದ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದಾರೆ.

ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದ ವೇಳೆ 2015 ಮಾರ್ಚ್ 16 ರಂದು ಡಿ.ಕೆ ರವಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿತ್ತು. ಈ ವಿಚಾರವನ್ನು ವಿರೋಧ ಪಕ್ಷಗಳು ದೊಡ್ಡ ಅಸ್ತ್ರವಾಗಿ ಬಳಸಿಕೊಂಡವು.

ಡಿ.ಕೆ ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬ ಬಗ್ಗೆ ಎರಡು ಮಾತಿಲ್ಲ. ಇದರ ಜೊತೆಗೆ ಪ್ರಚಾರ ಪ್ರಿಯರು ಆಗಿದ್ದರು. ಮರಳು ಮತ್ತು ಭೂ ಮಾಫಿಯಾ ವಿರುದ್ಧ ಪ್ರತಿ ಬಾರಿ ಕ್ರಮಕೈಗೊಳ್ಳುವ ಮುಂಚೆ ಮೀಡಿಯಾಗಳಿಗೆ ಮೊದಲು ತಿಳಿಸಿ, ನಂತರ ಕ್ರಮ ಜರುಗಿಸುತ್ತಿದ್ದರು. ಈ ಮೂಲಕ ಬಹುಬೇಗ ಜನಪ್ರಿಯತೆ ಗಳಿಸುವ ಪ್ರಯತ್ನ ಮಾಡಿದ್ದರು. ಇದು ನನ್ನ ಅನುಭವಕ್ಕೆ ಬಂದದ್ದಷ್ಟೇ ಅಲ್ಲ ರಾಮಕೃಷ್ಣ ಉಪಾಧ್ಯ ಅವರ ಪುಸ್ತಕದಲ್ಲೂ ಉಲ್ಲೇಖಿಸಲಾಗಿದೆ.

ಅವರನ್ನು ವರ್ಗಾವಣೆ ಮಾಡುವಂತೆ ನಮ್ಮ ಪಕ್ಷದ ಯಾವುದೇ ಶಾಸಕರು ನನ್ನ ಬಳಿ ಒತ್ತಡ ಹೇರಿರಲಿಲ್ಲ. ಒಮ್ಮೆ ಡಿ.ಕೆ ರವಿ ಅವರ ಮಾವ ಹನುಮಂತರಾಯಪ್ಪ ಅವರು ರಮೇಶ್ ಕುಮಾರ್ ಅವರ ಜೊತೆ ಬಂದು ತಮ್ಮ ಮಗಳು ಬೆಂಗಳೂರಿನಲ್ಲಿ ಇದ್ದಾರೆ, ಹೀಗಾಗಿ ರವಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು. ನಂತರ ನಾನು ಅವರನ್ನು ಕಮರ್ಷಿಯಲ್ ಟ್ಯಾಕ್ಸ್ ಅಂಡ್ ಎನ್‌ಫೋರ್ಸ್‌ಮೆಂಟ್ ಇಲಾಖೆಯ ಅಸಿಸ್ಟೆಂಟ್ ಕಮಿಷನರ್ ಆಗಿ ವರ್ಗಾವಣೆ ಮಾಡಿದ್ದೆ. ಕೋಲಾರದಲ್ಲೇ ಡಿ.ಸಿ ಯಾಗಿ ಮುಂದುವರೆಯಬೇಕು ಎಂಬ ಆಸೆ ಇದ್ದುದ್ದರಿಂದ ರವಿ ಅವರಿಗೆ ಈ ವರ್ಗಾವಣೆ ಅಷ್ಟೊಂದು ಸಂತಸದಾಯಕವಾಗಿ ಇರಲಿಲ್ಲವೇನೋ ಎಂಬುದು ನನ್ನ ಭಾವನೆ.

ಕಾನೂನು ರೀತ್ಯಾ ಹಣ ಮಾಡಬೇಕೆಂಬ ಆಸೆಯಿಂದ ರಿಯಲ್ ಎಸ್ಟೇಟ್ ಆರಂಭಿಸಿದರು. ಅವರಿಗೆ ಹರಿಕೃಷ್ಣ ಮತ್ತು ಚಂದ್ರಶೇಖರ ಎಂಬ ಇಬ್ಬರು ಗೆಳೆಯರಿದ್ದರು. ಈ ಗೆಳೆಯರ ಜೊತೆಗೂಡಿ ಆರ್ ಅಂಡ್ ಎಚ್ ಎಂಬ ರಿಯಲ್ ಎಸ್ಟೇಟ್ ಕಂಪನಿ ಶುರು ಮಾಡಿದರು. ಒಂದು 500 ಕೋಟಿ ಹಣ ಸಂಪದಾನೆ ಮಾಡಿ, ನಂತರ ಐ.ಎ.ಎಸ್ ಹುದ್ದೆಗೆ ರಾಜೀನಾಮೆ ನೀಡಿ ದೊಡ್ಡ ಉದ್ಯಮಿಯಾಗಬೇಕು ಎಂದು ಅವರ ಮಹದಾಸೆಯಾಗಿತ್ತು. ಆದರೆ ಹಣ ಮಾಡುವ ಅವರ ಈ ಆಸೆ ಈಡೇರಲಿಲ್ಲ.‌ ಇದು ಅವರ ಜೀವನದ ವೈಫಲ್ಯ.

ರವಿ ಅವರ ಆತ್ಮಹತ್ಯೆ ವಿಷಯವನ್ನು ಮುಂದಿಟ್ಟಕೊಂಡು ಪ್ರತಿಪಕ್ಷಗಳು ರದ್ಧಾಂತ ಮಾಡಿದವು. ಮಾಧ್ಯಮಗಳು ಬೆಂಕಿಗೆ ತುಪ್ಪ ಸುರಿದವು. ಸಾಕ್ಷ್ಯಾಧಾರ ಇಲ್ಲದೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದವು. ತನಿಖೆ ಇಲ್ಲದೆಯೇ ಮಾಧ್ಯಮಗಳು ತೀರ್ಪು ನೀಡಿದವು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಒಂದು ವಾರ ಏನೆಲ್ಲ ನಾಟಕಗಳು ನಡೆದವು. ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಸದಾನಂದ ಗೌಡ ಈ ಎಲ್ಲರೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಆಗ್ರಹಿಸಿದರು. ಈ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಲು ನಮ್ಮ‌ ಸರ್ಕಾರ ಯಾವುದೇ ಹಿಂದೇಟು ಹಾಕಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಆರು ಪ್ರಕರಣಗಳನ್ನು ಸಿ.ಬಿ.ಐ ಗೆ ವಹಿಸಿದ್ದೆವು. ಬಿಜೆಪಿ ಸರ್ಕಾರ ಯಾವುದಾದರೂ ಒಂದು ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಿದೆಯಾ? ಇದೇ ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್ ಎಂದು ಲೇವಡಿ ಮಾಡುತ್ತಿದ್ದವರು. ಅಪ್ರಮಾಣಿಕ ರಾಜಕಾರಣ ಮಾಡುವುದರಲ್ಲಿ ಅವರು ನಿಸ್ಸೀಮರು.

ಜೆಡಿಎಸ್ ನವರು ಡಿ.ಕೆ. ರವಿ ಅವರ ತಂದೆ, ತಾಯಿಯನ್ನು ಕರೆತಂದು ವಿಧಾನಸೌಧದ ಮುಂದೆ ಧರಣಿ ಕೂರಿಸಿದರು. ರವಿ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಹೇಳಿದರೂ ಅವರು ಕೇಳಲಿಲ್ಲ. ಯಾವುದಾದರೂ ಸರ್ಕಾರ ಘಟನೆ ನಡೆದ ವಾರದೊಳಗೆ ಸಿಬಿಐ ತನಿಖೆಗೆ ಒಪ್ಪಿಸಿದ್ದರೆ ಅದು ನಮ್ಮ ಸರ್ಕಾರ.

ನಮಗೂ ಘಟನೆಗೂ ಸಂಬಂಧ ಇರಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ ಎಂಬ ಆಶಯದೊಂದಿಗೆ ಧೈರ್ಯವಾಗಿ ನಮ್ಮ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತು. ಸಿ.ಬಿ.ಐ ವರದಿ ತುಂಬಾ ತಡವಾಗಿ ಬಂದಿತ್ತು. ಇದು ಸಿಬಿಐಗೆ ವಹಿಸುವ ಪ್ರಕರಣವಾಗಿರಲಿಲ್ಲ. ಈ ಹಿಂದೆ ಸಿ.ಐ.ಡಿ ಇಲಾಖೆಗೆ ನಡೆಸಿದ್ದ ತನಿಖೆ ಸರಿಯಾದ ಹಾದಿಯಲ್ಲಿ ಇತ್ತು ಎಂಬುದನ್ನು ಸಿಬಿಐ ವರದಿ ಹೇಳಿತ್ತು.

ಏಕಮುಖ ಪ್ರೀತಿ ಅಪಾಯಕಾರಿ. ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನದ ಪರಮಾವಧಿ.

ಪುಸ್ತಕದಲ್ಲಿ ಹೇಳುರುವಂತೆ ಭೂಮಿ, ಕಾಮ, ಆಡಿಯೋ ಟೇಪ್ ರವಿ ಆತ್ಮಹತ್ಯೆಗೆ ಕಾರಣವೇ ಹೊರತು ಬೇರೆ ಯಾರೂ ಕಾರಣರರಲ್ಲ.‌ ಸತ್ಯ ಎಂದಿದ್ದರೂ ಹೊರಗೆ ಬಂದೇ ಬರುತ್ತದೆ. ಸಿಬಿಐ ತನಿಖಾ ವರದಿಯನ್ನು ನಮ್ಮ ಸರ್ಕಾರ ಇದ್ದಾಗಲೇ ಜನರ ಮುಂದೆ ಇಡಬೇಕಾಗಿತ್ತು. ಆದರೆ, ಸಾವಿನ ಹಿಂದಿನ ಸತ್ಯ ಅದಾಗಲೇ ಬಹಿರಂಗವಾಗಿದ್ದರಿಂದ ಆ ಕೆಲಸ ನಾವು ಮಾಡಲಿಲ್ಲ.

ಒಂದಂಕಿ ಲಾಟರಿಯಲ್ಲಿ ನಾನು ಮತ್ತು ಜಾರ್ಜ್ ಅಪಾರ ಹಣ ಮಾಡಿದ್ದೇವೆ ಎಂದು ಜೆ.ಡಿ.ಎಸ್ ಆರೋಪ ಮಾಡಿತ್ತು. ಮರುದಿನವೇ ಪ್ರಕರಣವನ್ನು ಸಿ.ಬಿ.ಐ ಗೆ ವಹಿಸಿದೆ. ಕೊನೆಗೆ ಏನಾಯ್ತು?

ನಾವು ಅಧಿಕಾರದಲ್ಲಿದ್ದಾಗ ಪಾರದರ್ಶಕವಾಗಿ ಆಡಳಿತ ನಡೆಸಿದ್ದೇವೆ. ರಾಜಕಾರಣಿಗಳು, ಅಧಿಕಾರಿಗಳಲ್ಲಿ ಒಳ್ಳೆಯವರು, ಕೆಟ್ಟವರು ಇದ್ದಾರೆ. ಈಗ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಎಲ್ಲಿಯವರೆಗೆ ಸಮಾಜ ಇಂಥದನ್ನು ವಿರೋಧಿಸುವುದಿಲ್ಲವೋ ಅಲ್ಲಿಯವರೆಗೆ ವ್ಯವಸ್ಥೆ ಸುಧಾರಿಸದು.

ನಾನು ಮೊದಲ ಬಾರಿ 1983 ರಲ್ಲಿ ಚುನಾವಣೆಗೆ ನಿಂತಾಗ ಕೇವಲ 63,000 ರಾಪಾಯಿ ಖರ್ಚಾಗಿತ್ತು. ಇಂದಿನ ರಾಜಕಾರಣ ಹಿಂದಿನಂತೆ ಇಲ್ಲ. ಇದಕ್ಕೆ ಯಾರನ್ನು ದೂಷಿಸಬೇಕು?

ಡಿ.ಕೆ ರವಿ ಆತ್ಮಹತ್ಯೆಗೆ ಸಂಬಂಧಿಸಿದ ಸಿಬಿಐ ವರದಿಯನ್ನು ಸದನದ ಮುಂದಿಟ್ಟು, ಸತ್ಯಸಂಗತಿಯನ್ನು ಜನರಿಗೆ ತಿಳಿಸಬೇಕಿತ್ತು, ನಾವದನ್ನು ಮಾಡಿಲ್ಲ. ನಾವು ಮಾಡಬೇಕಿದ್ದ ಈ ಕೆಲಸವನ್ನು ರಾಮಕೃಷ್ಣ ಉಪಾಧ್ಯಾಯ ಅವರು ಮಾಡಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು.