ಮಂಗಳೂರಿನಲ್ಲಿ ಮುಂದುವರೆದ  ಡ್ರಗ್ಸ್ ದಂಧೆ ಪತ್ತೆ ಕಾರ್ಯಾಚರಣೆ:  ಮತ್ತೆ ಹಲವರ ಬಂಧನ.

ಮಂಗಳೂರು,ಜನವರಿ,13,2023(www.justkannada.in):  ಮಂಗಳೂರಿನಲ್ಲಿ ಪೊಲೀಸರಿಂದ  ಡ್ರಗ್ಸ್ ದಂಧೆ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು ಇಂದು ಹಲವರನ್ನ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಕೇಸ್​​ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಬಾಲಾಜಿ(29) ಹಾಗೂ ಪಿಜಿ ವಿದ್ಯಾರ್ಥಿ ಡಾ.ರಾಘವ ದತ್ತಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಮಂಗಳೂರಿನ ಕುಂಟಿಕಾನ ಬಳಿ ಕಾರಿನಲ್ಲಿ‌ ಗಾಂಜಾ ಸಾಗಿಸುತ್ತಿದ್ದಾಗ 10 ಗಾಂಜಾ ಸಮೇತ ಓರ್ವ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯ ಕುಮಾರ್ ಶೆಟ್ಟಿ(24) ಬಂಧಿತ ಆರೋಪಿ. ಈತ ಚಿಕ್ಕಮಗಳೂರು ಜಿಲ್ಲೆ ಎ‌ನ್‌.ಆರ್.ಪುರ ತಾಲೂಕಿನ ನಿವಾಸಿಯಾಗಿದ್ದು ಆಂಧ್ರದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕಾರು, ಮೊಬೈಲ್ ಸೇರಿ​​​ 5.65 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ.

ಈ ಮಧ್ಯೆ  ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಹಾಗೂ ಓರ್ವ ವೈದ್ಯಕೀಯ ವಿದ್ಯಾರ್ಥಿಯನ್ನು  ಬಂಧಿಸಲಾಗಿದೆ. ಡ್ರಗ್ಸ್ ಪೂರೈಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ಮೂಲದ ಸುಕೇತ್ ಕಾವಾ(33), ಉಡುಪಿಯ ಸುನೀಲ್(32), ತಮಿಳುನಾಡಿನ ಅರವಿಂದ(24) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳಿಂದ ಗಾಂಜಾದಿಂದ ತಯಾರಿಸಿದ ಭಾರಿ ಪ್ರಮಾಣದ ಚರಸ್ ಜಪ್ತಿ ಮಾಡಿದ್ದಾರೆ. ಆರೋಪಿಗಳು ಉತ್ತರ ಪ್ರದೇಶದಿಂದ ರೈಲಿನಲ್ಲಿ ಗಾಂಜಾ ತಂದು ಮಂಗಳೂರಿನ ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಬೃಹತ್ ಡ್ರಗ್ಸ್ ದಂಧೆ ಭೇದಿಸಿದ್ದ ಪೊಲೀಸರು ಇಬ್ಬರು ವೈದ್ಯರು ಹಾಗೂ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನ ಬಂಧಿಸಿದ್ದರು.

Key words: Drug- peddling -operation – Mangalore-arrested.