ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸುವುದಿಲ್ಲ : ಲೇಖಕಿ ಡಾ ವಿಜಯಾ

 

ಬೆಂಗಳೂರು, ಡಿ.19, 2019 : ಇದು ನನಗೆ ವಯಕ್ತಿಕವಾಗಿ ಕೊಟ್ಟ ಪ್ರಶಸ್ತಿ ಅಲ್ಲ. ಇದು ಮಹಿಳಾ ಲೋಕದ ದನಿಗೆ ಕೊಟ್ಟ ಪ್ರಶಸ್ತಿ. ವೈದೇಹಿ ಅವರಿಗೆ ಪ್ರಶಸ್ತಿ ನೀಡಿದ ೧೦ ವರ್ಷಗಳ ನಂತರ ಇನ್ನೊಬ್ಬ ಲೇಖಕಿಗೆ ಈ ಪ್ರಶಸ್ತಿ ಸಿಕ್ಕಿದೆ. ಹಾಗಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದೂ ಸಹಾ ಒಂದು ಪ್ರತಿಭಟನೆಯೇ ಎಂದು ಲೇಖಕಿ ಡಾ ವಿಜಯಾ ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಇದು ಸರ್ಕಾರದ ಪ್ರಶಸ್ತಿ ಅಲ್ಲ ಎಂದ ಅವರು ನಾನು ಇದುವರೆಗೂ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನಾಗಲೀ, ಅತ್ತಿಮಬ್ಬೆ ಪ್ರಶಸ್ತಿಯನ್ನಾಗಲೀ ಸ್ವೀಕರಿಸಿಲ್ಲ. ಆದರೆ ಅಕಾಡೆಮಿಗಳು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಕೃತಿಯಲ್ಲೂ ನಾನು ಸಂಘ ಪರಿವಾರವನ್ನೂ ಸಹಾ ನೇರವಾಗಿ ಪ್ರಶ್ನಿಸಿದ್ದೇನೆ. ಈ ಪ್ರಶಸ್ತಿಗಳಿಂದ ನನ್ನ ಮಾತನ್ನು, ನನ್ನ ಹೋರಾಟವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ನಾನು ಯಾವತ್ತೂ ಹೋರಾಟದ ಅಂಗಳದಲ್ಲಿರುವವಳು ಹಾಗೂ ನಿರ್ಭಿಡೆಯ ಮಾತನ್ನಾಡುವವಳು ಎಂದು ಅವರು ನೇರವಾಗಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯಿದೆಯ ಔಚಿತ್ಯವನ್ನು ಪ್ರಶ್ನಿಸಿದ ಅವರು ತುರ್ತು ಪರಿಸ್ಥಿತಿಯನ್ನೂ ಮೀರಿದ ಒಂದು ಭಯಾನಕ ಪರಿಸ್ಥಿತಿ ನಮ್ಮ ಮುಂದಿದೆ. ಈ ವ್ಯವಸ್ಥೆಗೆ ಯಾರನ್ನೂ ಕೇಳುವ ಮನಸ್ಸಿಲ್ಲ. ಇದು ಸಂಪೂರ್ಣವಾಗಿ ಸರ್ವಾಧಿಕಾರಿ ಸರ್ಕಾರ ಎಂದು ಆತಂಕ ವ್ಯಕ್ತಪಡಿಸಿದರು.

ಕೃಪೆ : ‘ಅವಧಿ’

key words : dr.vijaya-kannada-academy-award