ಡಾ.ರಾಜ್ ಕುಮಾರ್ ಸರಳತೆ – ಸಂಸ್ಕಾರದ ರಾಯಭಾರಿ: ಸಿಎಂ ಸಿದ್ದರಾಮಯ್ಯ

ಸಮಾಜದ ಜಾತಿ ತಾರತಮ್ಯ ಅಳಿಸಲು ಶ್ರಮಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಜೂನ್ 9, 2023 (www.justkannada.in): ನಾನು ಮುಖ್ಯಮಂತ್ರಿ ಆಗುವುದಕ್ಕೆ ಸಮಾಜದ ಕೊಡುಗೆ ಅಪಾರ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜಕ್ಕೆ ಧನ್ಯತೆ ಅರ್ಪಿಸಿದರು.

ಡಾ.ರಾಜ್ ಕುಮಾರ್ ಅಕಾಡೆಮಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2022ರ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಡಾ.ರಾಜ್ ಕುಮಾರ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ . ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ದೊಡ್ಡ ಸಂಸ್ಕಾರದ ರಾಯಭಾರಿ ಆಗಿದ್ದವರು. ಡಾ.ರಾಜ್ ಅವರ ಬದುಕಿನಿಂದ ನಾವು ಕಲಿಯಬೇಕಾದ್ದು, ರೂಢಿಸಿಕೊಳ್ಳಬೇಕಾದ್ದು ತುಂಬಾ ಇದೆ. ಡಾ.ರಾಜ್ ಕುಮಾರ್ ಅಕಾಡೆಮಿ ಅಪಾರ ಯಶಸ್ಸು ಗಳಿಸಲು ರಾಘವೇಂದ್ರ ರಾಜ್ ಕುಮಾರ್ ಮತ್ತು ಅಕಾಡೆಮಿ ಸಿಬ್ಬಂದಿಯ ಕೊಡುಗೆ ಅಪಾರವಿದೆ ಎಂದರು.

ಜಾತಿ ತಾರತಮ್ಯದ ಕಾರಣದಿಂದ ಶಿಕ್ಷಣದಿಂದ ವಂಚಿತರಾದವರು ಅಪಾರವಾಗಿದ್ದಾರೆ. ಇವರಿಗೆ ಶಿಕ್ಷಣದ ಜತೆಗೆ ಬದುಕಿನ ಅವಕಾಶಗಳೂ ದೊರಕುವುದಿಲ್ಲ. ಯುಪಿಎಸ್ ಸಿ ನಲ್ಲಿ ತೇರ್ಗಡೆ ಹೊಂದಿದವರು ಈ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸುವ ಮೂಲಕ ದೇಶದ ಮತ್ತು ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಮಾಜಿ ರಕ್ಷಣಾ ಕಾರ್ಯದರ್ಶಿಗಳಾದ ಡಾ.ಶ್ರೀನಿವಾಸನ್, ಭಾರತೀಯ ಸೇನಾ ಸಿಬ್ಬಂದಿಯ ಮಾಜಿ ಉಪ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ರಮೇಶ್ ಹಲಗಲಿ, ಮಾಜಿ ಪ್ರಧಾನ ಮುಖ್ಯ ಆಯುಕ್ತರಾದ ಕೆ.ಸತ್ಯನಾರಾಯಣ, ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಕೆ.ನಾರಾಯಣಗೌಡ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಪ್ರೇರಣಾ ಶಕ್ತಿ ರಾಘವೇಂದ್ರ ರಾಜ್ ಕುಮಾರ್ ಹಾಗೂ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ವೇದಿಕೆಯಲ್ಲಿದ್ದರು.

*ಬನ್ನಿ ಬನ್ನಿ ನಮ್ ಕಾಡಿನವರು*
ಡಾ.ರಾಜ್ ಮತ್ತು ತಮ್ಮ ನಡುವಿನ ಒಡನಾಟದ ನೆನಪನ್ನು ಮೆಲುಕು ಹಾಕಿದ ಮುಖ್ಯಮಂತ್ರಿಗಳು, ನಾನು ರಾಜ್ ಅವರನ್ನು ಭೇಟಿ ಮಾಡಲು ಹೋದಾಗಲೆಲ್ಲ, “ಬನ್ನಿ ಬನ್ನಿ ನಮ್ ಕಾಡಿನವರು” ಎಂದು ಖುಷಿಯಿಂದ ಕರೆಯುತ್ತಿದ್ದರು. ನಾವಿಬ್ಬರೂ ಒಂದೇ ಜಿಲ್ಲೆಯವರು ಎಂದು ಸ್ಮರಿಸಿದರು.