ಇಂದು ಅನರ್ಹ ಶಾಸಕರು ಬೆಂಗಳೂರಿಗೆ ವಾಪಸ್…?

ಬೆಂಗಳೂರು,ಆ,24,2019(www.justkannada.in):  ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಕುರಿತು ತಮ್ಮ ವಕೀಲರ ಜತೆ ಚರ್ಚಿಸಲು ನವದೆಹಲಿಗೆ ತೆರಳಿರುವ ಅನರ್ಹ ಶಾಸಕರು ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

ತಮ್ಮನ್ನ ಶಾಸಕ ಸ್ಥಾನದಿಂದ ಸ್ಪೀಕರ್ ಅನರ್ಹಗೊಳಿಸಿರುವುದನ್ನ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಅಯೋಧ್ಯ ವಿಚಾರಣೆ ನಡೆಯುತ್ತಿರುವುದರಿಂದ ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬವಾಗಿದೆ ಎನ್ನಲಾಗಿದೆ.

ಈ ಸಂಬಂಧ ಚರ್ಚಿಸಲು ನವದೆಹಲಿಗೆ ತೆರಳಿದ್ದ ಅನರ್ಹ ಶಾಸಕರು ನಿನ್ನೆ ರಾತ್ರಿ ತಮ್ಮ ವಕೀಲರನ್ನ ಭೇಟಿ ಮಾಡಿದ್ದು ತುರ್ತು ವಿಚಾರಣೆ ಕುರಿತು ಚರ್ಚೆ ನಡೆಸಿದ್ದಾರೆ. ಈ ನಡುವೆ ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಗೊಳ್ಳುವ ವಿಶ್ವಾಸವಿರುವ ಹಿನ್ನೆಲೆ ಇಂದು ಬಹುತೇಕ ಅನರ್ಹ ಶಾಸಕರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಇನ್ನು ಕೆಲ ಶಾಸಕರು ಮಾತ್ರ ನವದೆಹಲಿಯಲ್ಲಿ ಇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: disqualified- MLAs- Return – Bangalore -Today