ಸಂಸದ ಸುರೇಶ್ ಅಂಗಡಿಗೆ ರಾಜ್ಯಖಾತೆ: ಕೇಂದ್ರದಿಂದ ಲಿಂಗಾಯಿತರಿಗೆ ಅಪಮಾನವೆಂದು ಅಸಮಾಧಾನ ವ್ಯಕ್ತಪಡಿಸಿದ ಎಂ.ಬಿ ಪಾಟೀಲ್

ವಿಜಯಪುರ,ಜೂ.3,2019(www.justkannada.in):  ರಾಜ್ಯದಲ್ಲಿ 10 ಲಿಂಗಾಯಿತ ಸಂಸದರು ಆಯ್ಕೆಯಾಗಿದ್ದಾರೆ. ಆದರೆ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಲಿಂಗಾಯಿತರನ್ನ ಕಡೆಗಣಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಂಬಿ ಪಾಟೀಲ್,  ರಾಜ್ಯದಿಂದ ಲಿಂಗಾಯಿತ ಸಮುದಾಯದವರು 10 ಜನ ಸಂಸದರಾದರೂ ಒಬ್ಬರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಸಂಸದ ಸುರೇಶ್ ಅಂಗಡಿಗೆ ಕ್ಯಾಬಿನೆಟ್ ಸ್ಥಾನ  ನೀಡಬೇಕಿತ್ತು. ಆದರೆ ರಾಜ್ಯಖಾತೆ ನೀಡಿ ಕೇಂದ್ರ ಸರ್ಕಾರ ಲಿಂಗಾಯಿತರಿಗೆ ಅಪಮಾನ ಮಾಡಿದೆ. ಸುರೇಶ್ ಅಂಗಡಿಯವರನ್ನು ರಾಜ್ಯ ಸಚಿವರನ್ನಾಗಿ ಮಾಡಿ, ಪ್ರಹ್ಲಾದ ಜೋಶಿಯವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಲಾಗಿದೆ. ಇದು ಬಿಜೆಪಿ ಮನಸ್ಥಿತಿಯನ್ನು ತೋರಿಸುತ್ತದೆ  ಎಂದು ಕಿಡಿಕಾರಿದರು.

ಹಿಂದಿ ಭಾಷೆ ಹೇರಿಕೆ ಕುರಿತು ಪ್ರತಿಕ್ರಿಯಿಸಿದ ಎಂಬಿ ಪಾಟೀಲ್,  ಯಾವುದೇ ಭಾಷೆಯನ್ನು ಹೇರುವಾಗ ವ್ಯಾಪಕವಾಗಿ ಚರ್ಚೆ ಅಗತ್ಯ. ಸ್ಥಳೀಯರ ಜತೆ ಚರ್ಚಿಸಿ ನಂತರ ಜಾರಿಗೆ ಮಾಡಬೇಕು. ಅದನ್ನ ಬಿಟ್ಟು ಅನಗತ್ಯವಾಗಿ ಒಂದು ಭಾಷೆಯನ್ನು ಮತ್ತೊಬ್ಬರ ಮೇಲೆ ಹೇರಬಾರದು ಎಂದು ಖಂಡಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್‍ಗೆ ಬಿಟ್ಟದ್ದು, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ದೇವೇಗೌಡರು ಚರ್ಚಿಸುತ್ತಾರೆ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದೇ ಸೋಲಿಗೆ ಕಾರಣವೆಂಬುದನ್ನು ವೈಯಕ್ತಿಕವಾಗಿ ನಾನು ಒಪ್ಪುವುದಿಲ್ಲ. ರಾಜಸ್ತಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸೋತಿದೆ. ಆದರೆ ಅಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿಲ್ಲ  ಎಂದು ಹೇಳಿದರು.

Key words: Disgrace to the linguists from the center- M. B. Patil expressed displeasure.

#vijaypur #mbpatil #displeasure #centralgovrnament #lingayath