ಜಮೀನಿಗೆ ಗಡಿ ನಿಗದಿ ಮಾಡಲು ಲಂಚಕ್ಕೆ ಬೇಡಿಕೆ: ಇಬ್ಬರ ಬಂಧನ.

ಬೆಂಗಳೂರು,ಆಗಸ್ಟ್,26,2021(www.justkannada.in): ಜಮೀನಿಗೆ ಗಡಿ ನಿಗದಿ ಮಾಡಲು ಲಂಚಕ್ಕೆ ಬೇಡಿಕೆಯೊಡ್ಡಿದ್ದ ಉನ್ನತ ಅಧಿಕಾರಿ ಮತ್ತು ಆತನ ಸಹಾಯಕ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಅಧಿಕಾರಿ ಆನಂದ, ಸಹಾಯಕ ಸಿಬ್ಬಂದಿ ರಮೇಶ್ ಬಂಧಿತರು. ಆನಂದ ರೆವೆನ್ಯೂ ಡಿಪಾರ್ಟ್​​ಮೆಂಟ್​​ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರಿಕಾರ್ಡ್ (ADLR) ಆಗಿದ್ದು,  ಈತ  ಜಮೀನಿಗೆ ಗಡಿ ನಿಗದಿ ಮಾಡಲು ಬರೋಬ್ಬರಿ 70 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ನಿನ್ನೆ ರಾತ್ರಿ ಬೆಂಗಳೂರಿನ ಮೂರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮೀನು ಸರ್ವೆ ನಂ. 145, 146 ಸಂಬಂಧ ಲಂಚದಾಹ ಕಂಡುಬಂದಿತ್ತು. ಅಂತಾರಾಷ್ಟ್ರೀಯ ಏರ್​ಪೋರ್ಟ್​​ಗೆ ಹತ್ತಿರವಿರುವ ಯಲಹಂಕ ತಾಲ್ಲೂಕಿನ ಕುದುರುಗೆರೆಯ ಜಮೀನು ಇದಾಗಿತ್ತು. ಇಲ್ಲಿನ ಜಮೀನಿನ ಬೌಂಡರಿ ಫಿಕ್ಸ್ ಮಾಡೋಕೆ‌ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದರು.

ಕಂದಾಯ ಇಲಾಖೆಯ ಉನ್ನತಾಧಿಕಾರಿ ಆನಂದ ಪ್ರಕರಣದಲ್ಲಿ ಅಡ್ವಾನ್ಸ್ ಆಗಿ 20 ಲಕ್ಷ ರೂ ಹಣ ಮತ್ತೊಂದಿಷ್ಟು ಬ್ಯಾಂಕ್‌ ಚೆಕ್ ಪಡೆದಿದ್ದ. ಇದರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಎಸಿಬಿ ಆನಂದನ ಜಾಲಹಳ್ಳಿ ಮನೆ, DDLR ಕುಸುಮ ಲತಾ ಮನೆ ಮತ್ತು ಸರ್ವೆ ಅಧಿಕಾರಿ ಶ್ರೀನಿವಾಸ್ ​ಗೆ ಸೇರಿದ ತುಮಕೂರಿನ ಮನೆ ಸೇರಿ ಮೂರು ಕಡೆ ದಾಳಿ ನಡೆಸಿದ್ದರು.

ದಾಳಿ ವೇಳೆ ಎಸಿಬಿ ಅಧಿಕಾರಿಗಳು ಆನಂದ್ ಮನೆಯಲ್ಲಿ 25.30 ಲಕ್ಷ ನಗದು, 70 ಲಕ್ಷ ಮೊತ್ತದ ಮೂರು ಚೆಕ್ ಹಾಗೂ ಕೆಲ‌ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

Key words: Demand – bribes – set -boundary – land-two-arrest