ಬರ ನಿರ್ಮೂಲನೆಗಾಗಿ ‘ಬರ ಮುಕ್ತ ಕರ್ನಾಟಕ ಆಂದೋಲನ’ ಆರಂಭಿಸಲು ನಿರ್ಧಾರ…

ಮೈಸೂರು,ಮೇ,21,2019(www.justkannada.in):  ರಾಜ್ಯದಲ್ಲಿ ಪದೇ ಪದೇ ಬರಗಾಲ ಹಿನ್ನೆಲೆ. ಬರ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ರಾಜ್ಯ ರೈತ ಸಂಘ, ಹಸಿರು ಸೇನೆ ಪಣ ತೊಟ್ಟಿದ್ದು ಬರ ನಿರ್ಮೂಲನೆಗಾಗಿ ‘ಬರ ಮುಕ್ತ ಕರ್ನಾಟಕ ಆಂದೋಲನ’ ಆರಂಭಿಸಲು ನಿರ್ಧಾರ ಮಾಡಿದ್ದೇವೆ ಎಂದು  ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬರ ನಿರ್ಮೂಲನೆಗಾಗಿ 11 ಜನರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೆ 100  ಜನರನ್ನು ನೇಮಿಸಿ ಜಲ ಜಾಗೃತಿ ಮೂಡಿಸುತ್ತೇವೆ. ಜಾಗೃತಿಯಲ್ಲಿ ಶೇ.70 ರಷ್ಟು ರೈತರು, ಶೇ.30  ರಷ್ಟು ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ. ಜಲ ಜಾಗೃತಿಗಾಗಿ 50 ಮಂದಿ ನುರಿತ ತರಬೇತುದಾರರನ್ನ ನೇಮಕ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಲ ಜಾಗೃತಿ, ಜಲ ಸಂರಕ್ಷಣೆ, ನೀರಿನ ಮಿತಬಳಕೆ, ಹಸರೀಕರಣ ನಮ್ಮ ಧ್ಯೇಯವಾಗಿದೆ ಡಾ.ರಾಜೇಂದ್ರ ಸಿಂಗ್ ನೇತೃತ್ವದಲ್ಲಿ ಈ ಆಂದೋಲನ ನಡೆಯಲಿದ್ದು, ಕೆರೆ ಸಂರಕ್ಷಣೆ, ನದಿ ಮೂಲ ಸಂರಕ್ಷಣೆ, ಮಳೆ ನೀರು ಕೊಯ್ಲಿಗೆ ಒತ್ತು ನೀಡಲಾಗುತ್ತದೆ. ಜಲಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧಾರ ಮಾಡಲಾಗಿದೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.

ಆನೆ ಮತ್ತು ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಬೇಕು. ಈ ಸಂಘರ್ಷದಿಂದ ರೈತರ ಫಸಲು ಮತ್ತು ಪ್ರಾಣ ಹಾನಿಯಾಗುತ್ತಿದೆ. ಈ ಸಂಘರ್ಷ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ನಾತೂರಾಮ್ ಗೋಡ್ಸೆ ದಿನಾಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಡಗಲಪುರ ನಾಗೇಂದ್ರ, ಗೋಡ್ಸೆ ದಿನಾಚರಣೆ ಮಾಡುವುದು ಪ್ರಪಂಚ ತಲೆ ತಗ್ಗಿಸುವ ವಿಚಾರ. ನಮ್ಮ ದೇಶ ವಿಕೃತವಾದದ ಕಡೆಗೆ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

Key words: Decision to start ‘drought free Karnataka movement’ for eradication of drought.

#’droughtfree #Karnatakamovement’ #mysore #badagalapuranagendra