ಕೆಪಿಎಸ್ ಸಿಯ ಎ ಮತ್ತು ಬಿ  ದರ್ಜೆ ಹುದ್ದೆಗಳಿಗೆ ಸಂದರ್ಶನ ರದ್ದು ಮಾಡಲು ತೀರ್ಮಾನ: ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯ…

ಬೆಂಗಳೂರು,ಡಿ,30,2019(www.justkannada.in):  ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಕೆಪಿಎಸ್ ಸಿಯ  ಎ ಮತ್ತು ಬಿ ಹುದ್ದೆಗಳಿಗೆ  ನಡೆಸಲಾಗುತ್ತಿದ್ದ ಸಂದರ್ಶನವನ್ನ ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಇಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಕೆಪಿಎಸ್ ಸಿಯ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧಾರ ಕೈಗೊಳ್ಳಲಾಯಿತು.  ಆಯ್ದ ಇಲಾಖೆಗಳ ಎ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ನಡೆಸಲಾಗುತ್ತಿದ್ದ ಸಂದರ್ಶನವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುತ್ತಿಲ್ಲ.

 ಈ ಕುರಿತು ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ  ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಾಧುಸ್ವಾಮಿ, ಕೆಪಿಎಸ್ಸಿ ಮೂಲಕ ನೇಮಕ ಮಾಡಿಕೊಳ್ಳುತ್ತಿರುವ ಎ ಮತ್ತು ಬಿ ಗ್ರೇಡ್ ಹುದ್ದೆಗಳು ಸೇರಿದಂತೆ ಕೆಲ ಹುದ್ದೆಗಳಿಗೆ ಸಂದರ್ಶನದ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಇಂತಹ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಆಧಾರದ ಮೇಲೆಯೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂದರ್ಶನವನ್ನು ರದ್ದುಗೊಳಿಸುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳು..

ಬೆಂಗಳೂರಿನಲ್ಲಿ ನವೆಂಬರ್ 3,4,5 ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ತೀರ್ಮಾನ.

ಕಲ್ಯಾಣ ಕರ್ನಾಟಕ ಮಂಡಳಿಗೆ ಅಧ್ಯಕ್ಷರ ನೇಮಕ. ಆ ಭಾಗದ ಶಾಸಕರನ್ನೇ ಅಧ್ಯಕ್ಷರನ್ನಾಗಿ ನೇಮಕ.

ಮೈಸೂರು ರೇಸ್ ಕೋರ್ಸ್ ಪರವಾನಗಿ 30 ವರ್ಷಕ್ಕೆ ನವೀಕರಣ.

ಶಾಪ್ ಅಂಡ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಗೆ ತಿದ್ದುಪಡಿ. ರಾತ್ರಿ ಪಾಳಯದಲ್ಲೂ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವ  ಭದ್ರತೆ ಒದಗಿಸುವಂತೆ ಕೈಗಾರಿಕೆಗಳಿಗೆ ಸೂಚಿಸುವ ಕಾಯ್ದೆ. ಅಧಿವೇಶನದಲ್ಲಿ ಮಂಡಿಸಲು ನಿರ್ಧಾರ.

Key words: Decision – cancel -interviews – KPSC- A and B grade -posts