ರಾಜ್ಯದ ಬರ, ನೆರೆ ಸಂತ್ರಸ್ತರ ಎಲ್ಲಾ ಸಾಲಮನ್ನಾ ಮಾಡಿ-ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಒತ್ತಾಯ….

ಬೆಂಗಳೂರು,ಸೆ,16,2019(www.justkannada.in): ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರವಾಹ, ಬರದಿಂದ ರೈತರು ತತ್ತರಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯದ ಬರ,ನೆರೆ ಸಂತ್ರಸ್ಥರ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿ.ಎಸ್ ಉಗ್ರಪ್ಪ,  ಅಂದು ಸಿದ್ದರಾಮಯ್ಯ 8,163 ಕೋಟಿ ಸಾಲಮನ್ನಾ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ 1 ಲಕ್ಷದವರೆಗೆ ಸಾಲಮನ್ನಾ ಮಾಡಿದ್ದಾರೆ. ಈಗ ನಿಮಗೆ ಕಾಳಜಿಯಿದ್ದರೆ ಸಾಲಮನ್ನಾ ಮಾಡಿ. ರಾಜ್ಯದ ಬರ,ನೆರೆ ಸಂತ್ರಸ್ಥರ ಎಲ್ಲಾ ಸಾಲಮನ್ನಾ ಮಾಡಿ ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ರಿಸರ್ವ್ ಬ್ಯಾಂಕ್ ೧ ಲಕ್ಷ ೭೩ ಸಾವಿರ ಕೋಟಿ ಪ್ಯಾಕೇಜ್ ನೀಡಿದೆ. ನಿನ್ನೆ ೭೩ ಸಾವಿರ ಕೋಟಿ ಕೇಂದ್ರಕ್ಕೆ ಪ್ಯಾಕೇಜ್ ನೀಡಿದೆ. ರಾಜ್ಯ ಬರ,ನೆರೆ ಎರಡನ್ನೂ ಎದುರಿಸಿದೆ. ಈಗಿದ್ದರೂ ಕೇಂದ್ರ ಸರ್ಕಾರ ಪ್ಯಾಕೇಜ್ ಘೋಷಿಸಿಲ್ಲ. ಕಾರಣ ಕೇಂದ್ರವೇ ಆರ್ಥಿಕ ಸಮಸ್ಯೆಗೆ ಗುರಿಯಾಗಿದೆ. ನೆರೆ,ಬರೆಗೆ ಕೇಂದ್ರ ವಿಶೇಷ ಪ್ಯಾಕೇಜ್ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲದಂತಾಗಿದೆ ಎಂದು ಕೇಂದ್ರದ ಆರ್ಥಿಕ ಮುಗ್ಗಟ್ಟಿನ ಬಗ್ಗೆ ವಿ.ಎಸ್ ಉಗ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಪ್ರವಾಹ ಸಂತ್ರಸ್ತರ ಬಗ್ಗೆ ಈಶ್ವರಪ್ಪ, ಪ್ರಹ್ಲಾದ್ ಜೋಶಿ,ಡಿವಿಎಸ್,ಸವದಿ ಹೇಳಿಕೆಗಳು ಏನು..? ಅವರ ಮನಸ್ಥಿತಿಯಲ್ಲೇ  ಗೊತ್ತಾಗುತ್ತದೆ. ಸಂತ್ರಸ್ಥರ ಬಗ್ಗೆ ಮೊದಲು ಗಮನಹರಿಸಿ. ಜಾನುವಾರುಗಳಿಗೆ ಮೊದಲು ಮೇವು ನೀಡಿ ಎಂದು ರಾಜ್ಯ ಸರ್ಕಾರದ ವಿರುದ್ದ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.

ವಿವಿಧತೆಯಲ್ಲಿ ಏಕತೆಯನ್ನ ಮುರಿಯೋಕೆ ನೋಡ್ತಿದ್ದೀರಾ…

ಹಿಂದಿ ಹೇರಿಕೆ ಬಗ್ಗೆ ಅಮಿತ್ ಶಾ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿ.ಎಸ್ ಉಗ್ರಪ್ಪ, ದೇಶದಲ್ಲಿ ಹಲವು ಭಾಷೆಗಳಿವೆ. ಗುಜರಾತಿ, ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಅಸ್ಸಾಮಿ, ಪಜಾಬಿ, ಮಲಯಾ ಸೇರಿ 25 ಭಾಷೆಗಳಿವೆ. ನಿಮ್ಮ ಗುಜರಾತಿ ಕೂಡ ಪ್ರಾಂತೀಯ ಭಾಷೆ. ಇದನ್ನ ನೋಡಿಯೂ ನೀವು ಹಿಂದಿ ಹೇರಿಕೆಗೆ ಹೊರಟಿದ್ದೇಕೆ. ವಿವಿಧತೆಯಲ್ಲಿ ಏಕತೆಯನ್ನ ಮುರಿಯೋಕೆ ನೋಡ್ತಿದ್ದೀರಾ. ಸಂವಿಧಾನದ ಬಗ್ಗೆ ನಿಮಗೆ ಗೌರವವಿದ್ದರೆ ಕೈಬಿಡಿ ಎಂದು ಹಿಂದಿ ಹೇರಿಕೆ ಬಗ್ಗೆ ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಗೋ ಹತ್ಯೆ ನಿಷೇಧದ ಬಗ್ಗೆ ಬಿಜೆಪಿ ನಿಲುವೇನು…?

ವಿಶ್ವದಲ್ಲಿ ಹೆಚ್ಚು ಬೀಫ್ ಮಟನ್ ರಫ್ತಾಗುತ್ತಿದೆ. ಗುಜರಾತಿಗಳ ಕೈಯಲ್ಲೇ ವ್ಯಾಪಾರವಿದೆ. ಗೋ ಹತ್ಯೆ ನಿಷೇಧದ ಬಗ್ಗೆ ಬಿಜೆಪಿ ನಿಲುವೇನು. ಮೊದಲು ಇದಕ್ಕೆ ಬ್ರೇಕ್ ಹಾಕಿ ಈಶ್ವರಪ್ಪನವರೇ ಎಂದು ಮಾಜಿ ಸಂಸದ ಉಗ್ರಪ್ಪ ಲೇವಡಿ ಮಾಡಿದರು.

ರಾಜ್ಯದಲ್ಲಿಯೇ ಮೈಸೂರು ಪಾಕ್ ಪ್ರಾರಂಭವಾಗಿದ್ದು….

ಮೈಸೂರು ಪಾಕ್ ಗೆ ತಮಿಳುನಾಡು ಪೇಟೆಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉಗ್ರಪ್ಪ, ಮೈಸೂರು ಮಹಾರಾಜರ ಕಾಲದಿಂದ ಸ್ವೀಟ್ ಇದೆ. ಅದು ವಿಶ್ವದಲ್ಲೇ ಬಹಳ ಜನಪ್ರಿಯವಾಗಿದೆ. ರಾಜ್ಯದಲ್ಲಿಯೇ ಮೈಸೂರು ಪಾಕ್ ಪ್ರಾರಂಭವಾಗಿದ್ದು. ಇದನ್ನೂ ನೀವು ಮಾರೋಕೆ ಹೊರಟಿದ್ದು ಸರಿಯೇ. ನಿರ್ಮಲಾ ಸೀತಾರಾಮನ್ ಅವರೇ ಇದಕ್ಕೆ ಕೈಹಾಕಿದ್ದೇಕೆ….? ಇದರಲ್ಲೂ ರಾಜಕಾರಣ ಮಾಡೋಕೆ ಹೋಗಬೇಡಿ. ಮೈಸೂರು ಪಾಕ್ ಹೆಸರಲ್ಲೇ ಅದರ ಮೂಲವಿದೆ. ಇದನ್ನ ಮೊದಲು ಅರ್ಥ ಮಾಡಿಕೊಳ್ಳಿ ಎಂದು ಗುಡುಗಿದರು.

ಬೆಳಗಾವಿ ಅಧಿವೇಶನ ನಡೆಸೋಕೆ ಹಿಂದೇಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿಯವರಿಗೆ ಅಲ್ಲಿನ ಜನರ ಭಯ ಕಾಡೋಕೆ ಶುರುವಾಗಿರಬೇಕು. ಅಲ್ಲಿನ ಜನ ಹಕ್ಕಿನ ಬಗ್ಗೆ ಪ್ರಶ್ನೆ ಮಾಡೋ ಭಯವಿದೆ. ಸಂತ್ರಸ್ಥರ ಆಕ್ರೋಶ ಎದುರಿಸಬೇಕಾಗಬಹುದು. ಹೀಗಾಗಿಯೇ ಬೆಳಗಾವಿ ಸೆಷನ್  ರದ್ಧು ಮಾಡೋಕೆ ಹೊರಟಿರಬಹುದು. ಹಾಗೇನಾದರೂ ಮಾಡಿದರೆ ಅಲ್ಲಿನ ಜನರಿಗೆ ಅನ್ಯಾಯ ಮಾಡಿದಂತೆ. ಕೂಡಲೇ ಸೆಷನ್ ಕರೆಯಬೇಕು. ಸಂತ್ರಸ್ಥರ ಸಮಸ್ಯೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಳ್ಳಾರಿ ಜಿಲ್ಲೆ ಸಂಡೂರಿನ ವಡ್ಡು ಗ್ರಾಮದಲ್ಲಿ ಮಗುವಿನ ಮೇಲೆ ಅತ್ಯಾಚಾರ, ಮರ್ಡರ್ ವಿಚಾರ ಸಂಬಂಧ, ರೇಪ್ ,ಮರ್ಡರ್ ಆದರೆ. ನಿರ್ಭಯಾ ಕೇಸ್ ಅಡಿ 3 ಲಕ್ಷ ಪರಿಹಾರ ನೀಡಬೇಕು.  ಸಂಡೂರಿನಲ್ಲೇ ತಿಂಗಳಲ್ಲಿ ಎರಡು ರೇಪ್ ಆಗಿದೆ. ಆದರೆ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ದೊರಕಿಲ್ಲ. ಕೇಂದ್ರ,ರಾಜ್ಯ ಸರ್ಕಾರ ಎರಡರಿಂದಲೂ ಸಿಕ್ಕಿಲ್ಲ. ಪರಿಹಾರ ನೀಡೋಕೂ ಕೇಂದ್ರ,ರಾಜ್ಯ ಸರ್ಕಾರದ ಬಳಿ ಹಣವಿಲ್ಲವೇ. ಮೊದಲು ಹತ್ಯೆಯಾದ ಮಗುವಿನ ಕುಟುಂಬಕ್ಕೆ ಪರಿಹಾರ ನೀಡಿ. ಕೇಂದ್ರದ ನಿಯಾಮವಳಿಯಂತೆಯೇ ಪರಿಹಾರ ಒದಗಿಸಿ ಎಂದು ರಾಜ್ಯ, ಕೇಂದ್ರ ಸರ್ಕಾರಕ್ಕೆ ಉಗ್ರಪ್ಪ ಒತ್ತಾಯಿಸಿದರು.

Key words: debt –relief-drought -flood victims-Former MP VS Ugrappa – central government