400 ಹಾಸಿಗೆಗಳ ಕೋವಿಡ್‌ ಕೇರ್ ಕೇಂದ್ರಕ್ಕೆ ಭೇಟಿ: ಸ್ಥಳ ಪರಿಶೀಲನೆ‌ ನಡೆಸಿದ ಡಿಸಿಎಂ ಅಶ್ವಥ್ ನಾರಾಯಣ್.

ಬೆಂಗಳೂರು,ಜೂನ್,3,2021(www.justkannada.in):  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಶವಂತಪುರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ 400 ಹಾಸಿಗೆಗಳ ಅತ್ಯಾಧುನಿಕ ಕೋವಿಡ್‌ ಕೇರ್‌ ಸೆಂಟರ್‌ಗೆ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಜತೆಯಲ್ಲಿ ಕೂಲಂಕಷವಾಗಿ ವೀಕ್ಷಿಸಿದ ಅವರು ಎಲ್ಲ ಸೌಲಭ್ಯಗಳು, ಕಾಮಗಾರಿಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಇಲ್ಲಿ 300 ಆಕ್ಸಿಜನ್‌ ಹಾಗೂ 100 ಆಕ್ಸಿಜನ್‌ ರಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಇದನ್ನು ಕೋವಿಡ್‌ ಕೇರ್‌ ಆಗಿ ಬಳಸಿಕೊಳ್ಳಲಾಗುತ್ತಿದೆ. ತದನಂತರ ಪೂರ್ಣ ಪ್ರಮಾಣದ ಜನರಲ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗುವುದು. ಇದರಿಂದ ಕ್ಷೇತ್ರದ ಜನರಿಗೆ, ಅದರಲ್ಲೂ ಯಶವಂತಪುರ ಭಾಗಕ್ಕೆ ಹೆಚ್ಚು ಅನುಕೂಲವಾಗಲಿದೆ. ಈ ಆರೈಕೆ ಕೇಂದ್ರ ಸ್ಥಾಪನೆಗಾಗಿ ಮುನಿರತ್ನ ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಆ ಆಸ್ಪತ್ರೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಸರ್ವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದಷ್ಟು ಬೇಗ ಲೋಕಾರ್ಪಣೆ ಮಾಡಲಾಗುವುದು. ಮೂರನೇ ಅಲೆಯನ್ನು ಎದುರಿಸಲು ಅಗತ್ಯವಾದ ಎಲ್ಲ ಸೌಕರ್ಯಗಳು ಇಲ್ಲಿವೆ. ಸರಕಾರದಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ‌

Key words: DCM- Ashwath Narayan- Visit -400 bed- Covid Care Center-yashvanthapur