ಖುದ್ದು ಪೊರಕೆ ಹಿಡಿದು ಕಸ ಗೂಡಿಸಿದ ಮೈಸೂರಿನ ಕಾರ್ಪೊರೇಟರ್ ಗೊಂದು ಸಲಾಂ.

 

ಮೈಸೂರು, ಮೇ 01, 2019 : (www.justkannada.in news) : ಜನಪ್ರತಿನಿಧಿ ಅಂದ್ರೆ ಹೇಗಿರಬೇಕು ಎಂಬುದಕ್ಕೆ ಇಲ್ಲೊಂದು ತಾಜ ನಿದರ್ಶನ. ನಗರದ ಕಾರ್ಪೋರೇಟರ್ ಒಬ್ಬರು ಖುದ್ದು ಪೊರಕೆ ಹಿಡಿದು ಕಸ ಗೂಡಿಸುವ ಮೂಲಕ ಬಡಾವಣೆ ನಿವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೈಸೂರಿನ 61 ನೇ ವಾರ್ಡ್ ವಿದ್ಯಾರಣ್ಯಪುರಂನ ಕಾರ್ಪೋರೇಟರ್ ಶೋಭಾ ಸುನಿಲ್ ಬಡಾವಣೆ ನಿವಾಸಿಗಳ ಮೆಚ್ಚುಗೆ ಪಡೆದವರು.

ಇಲ್ಲಿನ ಸಾರ್ವಜನಿಕ ಹಾಸ್ಟೆಲ್ ಸಮೀಪ 6 ನೇ ಮೇನ್ ನಲ್ಲಿ ಡಿ.ಎಸ್. ಪಾಲನೇತ್ರ ಕುಟುಂಬ ಕಳೆದ ಕೆಲ ವರ್ಷಗಳಿಂದ ನೆಲೆಸಿದೆ. ಮನೆ ಸಮೀಪವೇ ಮರವೊಂದಿದ್ದು ಅದರ ಬುಡದಲ್ಲಿ ಕೆಲವರು ಕಸ ಸುರಿದು ಅದನ್ನು `ಡಂಪಿಂಗ್ ಸ್ಪಾಟ್’ ಮಾಡಿದ್ದರು. ಎಷ್ಟೆ ವಿನಂತಿಸಿದರು ಅದಕ್ಕೆ ಸೊಪ್ಪು ಹಾಕದೆ ಕಸ ಸುರಿಯುತ್ತಲೇ ಇದ್ದರು. ಇದರಿಂದ ಬೇಸತ್ತ ಕುಟುಂಬ ವರ್ಗ, ಸ್ಥಳೀಯ ನಗರ ಪಾಲಿಕೆ ಸದಸ್ಯೆ ಶೋಭಾ ಅವರ ಪತಿ ಸುನೀಲ್ (ಇವರು ಸಹ ಮಾಜಿ ಕಾರ್ಪೋರೇಟರ್ ) ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ವಿಷಯ ಮುಟ್ಟಿಸಿದರು. ಬಡಾವಣೆ ನಿವಾಸಿಗಳ ದೂರಿಗೆ ತಕ್ಷಣ ಸ್ಪಂಧಿಸಿದ ಸುನೀಲ್, ಮರುದಿನವೇ ಸ್ಥಳಕ್ಕಾಗಮಿಸಿ ಖುದ್ದು ಕಸಗೂಡಿಸಿ ಆವರಣ ಸ್ವಚ್ಛಗೊಳಿಸಿದರು.

ಪಾಲಿಕೆ ಸದಸ್ಯರ ಈ ಕೆಲಸ ಪಾಲನೇತ್ರ ಕುಟುಂಬ ಹಾಗೂ ಬಡಾವಣೆ ಇತರೆ ನಿವಾಸಿಗಳಿಗೆ ಅಚ್ಚರಿ ಜತೆಗೆ ಮೆಚ್ಚುಗೆಯನ್ನು ತಂದಿತು. ಜನಪ್ರತಿನಿಧಿ ಅಂದ್ರೆ ಹೀಗೂ ಇರ್ತಾರಾ ಎಂದು ಆಶ್ಚರ್ಯ ಪಡುವಂತೆ ಮಾಡಿದೆ ಈ ಘಟನೆ.
ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಸ್ಥಳೀಯ ನಿವಾಸಿ ದೀಪ್ತಿ ಚೇತನ್, ಕಸ ಸಂಗ್ರಹಕ್ಕೆ ನಿತ್ಯ ಪಾಲಿಕೆ ಸಿಬ್ಬಂದಿ ಆಗಮಿಸುತ್ತಾರೆ. ಆದರೆ ಕೆಲವರು ಕಸದ ವಾಹನ ಬಂದಾಗ ಕಸ ಹಾಕದೆ, ಆನಂತರ ಇಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಇಲ್ಲಿನ ಕೆಲ ಅಪಾರ್ಟ್ ಮೆಂಟ್ ನಿವಾಸಿಗಳು ಈ ರೀತಿ ಮಾಡುತ್ತಿದ್ದು ಕಸ ಸಂಗ್ರಹದಿಂದ ಸಾಂಕ್ರಾಮಿಕ ರೋಗ ಹರಡುವ ಅಪಾಯವಿದೆ. ಆದ್ದರಿಂದಲೇ ಪಾಲಿಕೆ ಸದಸ್ಯರಿಗೆ ಫೋನ್ ಮಾಡಿ ಸಮಸ್ಯೆ ತಿಳಿಸಿದೆವು. ಆಶ್ಚರ್ಯವೆಂಬಂತೆ ಅವರು ಮರುದಿನವೇ ಸ್ಥಳಕ್ಕಾಗಮಿಸಿ ಖುದ್ದು ಕಸ ತೆರವುಗೊಳಿಸಿ ಆವರಣ ಸ್ವಚ್ಛಗೊಳಿಸಿ ನಮ್ಮನ್ನು ಚಕಿತಗೊಳಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

corporater who cleans the garbage him self on a complaint