“ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದ ಕ್ರೈಸ್ತ ಸಮುದಾಯ” : ಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣ ನೇತೃತ್ವದಲ್ಲಿ ಸಭೆ

ಬೆಂಗಳೂರು,ಫೆಬ್ರವರಿ,07,2021(www.justkannada.in) : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

jk

ಬೆಂಗಳೂರಿನಲ್ಲಿ ಭಾನುವಾರ ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಆಯೋಜಿಸಿದ್ದ ಸಭೆಯಲ್ಲಿ, ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿದ್ದರಲ್ಲದೆ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿಯು ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ

ಭಾರತೀಯ ಜನತಾ ಪಕ್ಷವು ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಅಕ್ಷರಶಃ ಸುಳ್ಳು. ಅನೇಕ ವರ್ಷಗಳಿಂದ ಇಂಥ ಅಪಪ್ರಚಾರವನ್ನು ನಡೆಸಿಕೊಂಡು ಬರಲಾಗಿದೆ. ಬಿಜೆಪಿಯು ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

“ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌” ಬಿಜೆಪಿಯ ಮಂತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ, ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮತ್ತು ಸಬ್‌ ಕಾ ವಿಶ್ವಾಸ್‌” ಎಂಬುದು ಬಿಜೆಪಿಯ ಮಂತ್ರವಾಗಿದೆ. ಎಲ್ಲರನ್ನೂ ಒಳಗೊಂಡು ದೇಶವನ್ನು ಮುನ್ನಡೆಸುವುದು ಪಕ್ಷದ ಗುರಿಯಾಗಿದೆ. ಕೇಂದ್ರದಲ್ಲಿರಬಹುದು ಅಥವಾ ರಾಜ್ಯದಲ್ಲಿರಬಹುದು ಈ ತತ್ವದಡಿಯಲ್ಲೇ ಆಡಳಿತ ನಡೆಯುತ್ತಿದೆ ಎಂದರು.

“ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ”

ಕ್ರೈಸ್ತ ಸಮುದಾಯದ ಎಲ್ಲ ಗಣ್ಯರ ಪರವಾಗಿ ಸಭೆಯಲ್ಲಿ ಮಾತನಾಡಿದ ಉದ್ಯಮಿ ರೊನಾಲ್ಡ್‌ ಕೊಲಾಸೋ ಅವರು; “ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ-ದೇಶದ ಪ್ರತಿ ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ. ಶಿಕ್ಷಣ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಸೇವೆಯಲ್ಲಿ ನಿರತವಾಗಿದೆ ಎಂದರು.

“ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ; 36 ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ದೇಗುಲ ಮಾತ್ರವಲ್ಲದೆ ಚರ್ಚು, ಮಸೀದಿ ನಿರ್ಮಾಣಕ್ಕೂ ಕೈಲಾದ ನೆರವು ನೀಡಿದ್ದೇನೆ. ಇದೆಲ್ಲವನ್ನು ಮಾಡಿದ್ದು ಪರಸ್ಪರ ಸೌಹಾರ್ದತೆಗಾಗಿ ಮತ್ತೂ ನಾವೆಲ್ಲೂ ಒಂದು ಎಂಬ ಕಾರಣಕ್ಕಾಗಿ. ರಾಜ್ಯದಲ್ಲಿ ಕ್ರೈಸ್ತ ಅಭಿವೃದಿ ನಿಗಮ ಸ್ಥಾಪನೆಯಾಗಿದ್ದು, ಅದಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ” ಎಂದು ಕೊಲಾಸೋ ಹೇಳಿದರು.

ಇದೇ ವೇಳೆ; ಸಂತ ಜೋಸೇಫ್‌ ವಿಶ್ವವಿದ್ಯಾಲಯ ಸ್ಥಾಪನೆಯ ನಿಟ್ಟಿನಲ್ಲಿ ವಿಧಾನಮಂಡಲದಲ್ಲಿ ವಿಧೇಯಕ ಅಂಗೀಕಾರವಾಗಲು ಶ್ರಮಿಸಿದ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವಥ್ ನಾರಾಯಣ ಅವರನ್ನು ಕ್ರೈಸ್ತ ಮುಖಂಡರು ಅಭಿನಂದಿಸಿ ಗೌರವಿಸಿದರು.Construction,Ram Mandir,Cooperated,Christian,Community,DCM Dr.CN Ashwath Narayana,Meeting

ಬೆಂಗಳೂರಿನಲ್ಲಿರುವ ಮಾಲ್ಡೀವ್ಸ್‌ ರಾಯಭಾರ ಕಚೇರಿಯ ಕಾನ್ಸುಲ್‌ ಜನರಲ್‌ ಡಾ.ಜೋಸೆಫ್‌ ವಿ.ಜಿ., ಉದ್ಯಮಿಗಳಾದ ಜೋಸೆಫ್‌ ಫ್ರಾನ್ಸಿಸ್‌, ಸಿ.ಜೆ.ಬಾಬು, ಸಿಲ್ವಿಯಾನ್‌ ನರೋನ, ಕ್ಲ್ಯಾಡ್ಯುಯಸ್‌ ಪೆರಾರಿಯ, ಡಾ.ಥಾಮಸ್‌ ಟಿ. ಜಾನ್‌, ಚಾರ್ಲ್ಸ್‌ ಗೋಮೆಸ್‌, ರೋಶನ್‌ ಡಿಸಿಲ್ವ, ನಿಗೆಲ್‌ ಫರ್ನಾಂಡೀಸ್‌, ಸಂತೋಷ್‌ ಸೀಕ್ವೆರಿಯಾ, ಕ್ಲಾರೆನ್ಸ್‌ ಪೆರಾರಿಯಾ, ಪ್ರಮೋದ್‌ ಡಿಸೋಜ, ಎಂ.ಎಕ್ಸ್‌,ರಾಜು, ಡಾ.ಕೆ.ಸಿ.ಸ್ಯಾಮ್ಯುಯಲ್‌, ಅರುಣ್‌ ಫರ್ನಾಂಡೀಸ್‌, ಡಾ.ಸಂತೋಷ್‌ ಕೋಶಿ, ಸಮುದಾಯದ ಹಿರಿಯ ಮುಖಂಡ ಪಿ.ಕೆ.ಚೆರಿಯನ್‌, ಸಿ.ಜಿ.ವರ್ಗೀಸ್‌, ಮನೋಜ್‌ ರಾಜ್‌, ಐವಾನ್‌ ಡಿʼಕೋಸ್ಟಾ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜೆ ಜೋ ಜೋಸೆಫ್ ಉಪಸ್ಥಿತರಿದ್ದರು.

key words : Construction-Ram Mandir-Cooperated -Christian-Community-
DCM Dr.CN Ashwath Narayana-Meeting