ದೆಹಲಿ ಗಲಭೆಯ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರ: ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಆರೋಪ…….

ಚಿಕ್ಕೋಡಿ,ಫೆ,26,2020(www.justkannada.in): ದೆಹಲಿ ಗಲಭೆಯ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರವಿದೆ. ದೇಶಕ್ಕೆ, ಪ್ರಧಾನಿ ಮೋದಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಕಳಂಕ ತರುವ ಇಚ್ಛೆ ಕಾಂಗ್ರೆಸ್ ನಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲ್ ಆರೋಪಿಸಿದರು.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ದೇಶದಲ್ಲಿ ಕಾಂಗ್ರೆಸ್ ತನ್ನ ಅಧಿಕಾರವನ್ನು ಯಾವಾಗ ಕಳೆದುಕೊಂಡಿದೆ ಆಗ ಎಲ್ಲಾ ಸಂದರ್ಭಗಳಲ್ಲಿ ಗಲಭೆಗಳನ್ನ ಸೃಷ್ಟಿ ಮಾಡಿದೆ, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ, ಕಾಂಗ್ರೆಸ್‌ ನ ಆಳ್ವಿಕೆಯಲ್ಲಿ ಘನಘೋರ ಹತ್ಯಾಕಾಂಡಗಳನ್ನು ಕಂಡಿದ್ದೇವೆ, ಮುಂಬೈ ಸರಣಿ ಬಾಂಬ್ ಸ್ಪೋಟ್ ಸೇರಿದಂತೆ ಕಾಲ ಘಟ್ಟಗಳನ್ನು ನೆನಪಿಸಿಕೊಂಡು ಕಾಂಗ್ರೆಸ್ ಮುಖಂಡರು ಮಾತನಾಡಬೇಕು ಎಂದು ಟಾಂಗ್ ನೀಡಿದರು.

ದೆಹಲಿಯಲ್ಲಿ ನಡೆದ ಗಲಭೆ ಹಿಂದೆ ಕಾಂಗ್ರೆಸ್ ಪಕ್ಷದ ಷಡ್ಯಂತ್ರ ಇದೆ, ಅಮೇರಿಕಾ ಅಧ್ಯಕ್ಷ ಟ್ರಂಪ್ ಬರುವ ಸಂದರ್ಭದಲ್ಲಿ ಯಾಕೆ ಗಲಭೆ ಆರಂಭವಾಯಿತು..? ಎಂದು ಪ್ರಶ್ನಿಸಿದ ನಳೀನ್ ಕುಮಾರ್ ಕಟೀಲ್,  ದೇಶಕ್ಕೆ, ಪ್ರಧಾನಿ ಮೋದಿಗೆ ಹಾಗೂ ಬಿಜೆಪಿ ಪಕ್ಷಕ್ಕೆ ಕಳಂಕ ತರುವ ಇಚ್ಛೆ ಕಾಂಗ್ರೆಸ್ ನಲ್ಲಿದೆ, ಹುಡುಗರ ಕೈಯಲ್ಲಿ ಪಿಸ್ತೂಲ್, ಆಯುಧಗಳು ಎಲ್ಲಿಂದ ಬಂದವು..? ಕಾಂಗ್ರೆಸ್ ಪಕ್ಷ ದೇಶಕ್ಕೆ ಬೆಂಕಿ ಹಾಕಿ ರಾಜಕಾರಣ ಮಾಡುತ್ತಿದೆ ಎಂದುಕಿಡಿಕಾರಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾ ಉಮೇಶ ಕತ್ತಿಗೆ ಎಚ್ಚರಿಕೆ ನೀಡಿರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳೀನ್ ಕುಮಾರ್ ಕಟೀಲ್,  ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

Key words:  Congress party -behind – Delhi riots-BJP president -Nalin Kumar Katil