‘ಕೈ’ ದೊಡ್ಡ ನಾಯಕರು ನಮ್ಮ ಸಂಪರ್ಕದಲ್ಲಿ: ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ- ಶಾಸಕ ಸಿ.ಟಿ ರವಿ.

ಕಲ್ಬುರ್ಗಿ,ಮೇ,16,2022(www.justkannada.in): ಮೈಸೂರು ಭಾಗದ ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಯಾಗುವುದು ನಿಶ್ಚಿತ ಎಂದು ಸಚಿವ ಎಸ್.ಟಿ ಸೋಮಶೇಖರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ,  ಕಾಂಗ್ರೆಸ್ ನ ದೊಡ್ಡ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದಾರೆ ಎಂದಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಶಾಸಕ ಸಿ.ಟಿ ರವಿ, ಬುದ್ದಿವಂತರು ಕಾಂಗ್ರೆಸ್ ನಲ್ಲಿ ಇರಲು ಇಷ್ಟಪಡುವುದಿಲ್ಲ.  ಮಹಾಮೂರ್ಖರು ಮಾತ್ರ ಕಾಂಗ್ರೆಸ್ ನಲ್ಲಿರುತ್ತಾರೆ.  ಕಾಂಗ್ರೆಸ್ ಗೆ ಭವಿಷ್ಯವಿಲ್ಲ.  ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ಕಾಂಗ್ರೆಸ್ ನವರು ಒಂದು ಕುಟುಂಬಕ್ಕೆ ಒಂದು ಟಿಕೆಟ್ ಅಂತಿದ್ದಾರೆ. ಅದಕ್ಕೆ ಬೈಪಾಸ್ ದಾರಿಯನ್ನೂ ಕೂಡ ಹುಡುಕಿಕೊಂಡಿದ್ದಾರೆ.  ಇಂದಿನ ಕಾಂಗ್ರೆಸ್ ನಿಂದ ದೇಶಭಕ್ತಿ ಪ್ರಾಮಾಣಿಕತೆ ನಿರೀಕ್ಷಿಸಲು ಸಾಧ್ಯವಿಲ್ಲ.  ನಮಗೆ ಭಾರತ ರತ್ನ ಅಂಬೇಡ್ಕರ್ ಗೊತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಅಂಬೇಡ್ಕರ್ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.

ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ತ್ರಿಶೂಲ ದೀಕ್ಷೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ. ಭಜರಂಗದಳದ ಕಾರ್ಯಕರ್ತರಿಗೆ ಆತ್ಮರಕ್ಷಣೆಗಾಗಿ  ಪೊಲೀಸರಿಗೆ ನೀಡುವಂತೆ ತರಬೇತಿ ನೀಡಲಾಗಿದೆ ಎಂದರು.

Key words: congress-leaders-bjp-MLA-CT Ravi