MYSORE KIDNAP : ತಾತಾನ ಆರೈಕೆಗೆಂದು ಬಂದವರೇ ಮೊಮ್ಮಗನ ಅಪಹರಿಸಿದರು..!

ಮೈಸೂರು,ಜೂನ್,25,2022(www.justkannada.in): ತಾತನ ಅರೈಕೆಗೆಂದು ಬಂದವರೇ ಮೊಮ್ಮಗನನ್ನ ಅಪಹರಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಹೌದು, ಮೈಸೂರಿನಲ್ಲಿ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯವಾಗಿದ್ದು  ಐವರು ಆರೋಪಿಗಳನ್ನ ಬಂಧಿಸಲಾಗಿದೆ.

ಈ ಬಗ್ಗೆ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಚಂದ್ರಗುಪ್ತ,  ಸನು (23), ಕಿರಣ್ (20), ನಿತಿನ್ (21), ನಿಶಾಂತ್ (21) ಚೇತನ್ (22) ಬಂಧಿತ ಆರೋಪಿಗಳಾಗಿದ್ದಾರೆ.  ಬಂಧಿತ ಐವರು ಆರೋಪಿಗಳು ಕಾರಿನಲ್ಲಿ ವೈದ್ಯ ದಂಪತಿಯ ಮಗನನ್ನ ಅಪಹರಿಸಿದ್ದರು. ಸ್ಥಳೀಯರಿಂದ ಅಪಹರಣದ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ರಾತ್ರಿ 7 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದು ಆರೋಪಿಗಳು ಬಾಲಕನನ್ನ  ಕಿಡ್ನಾಪ್ ಮಾಡಿದ್ದರು. ಬಾಲಕನ ರಕ್ಷಣೆಗಾಗಿ ಹಲವು ತಂಡಗಳನ್ನು ರಚನೆ ಮಾಡಲಾಗಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ನಂತರ ಬಾಲಕನನ್ನ ರಕ್ಷಣೆ ಮಾಡಲಾಯಿತು. ಅದಾದ ಕೆಲವು ಗಂಟೆಗಳಲ್ಲಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದೇವೆ ಎಂದರು.

ಆರೋಪಿಗಳು ಗ್ರಾಮಾಂತರ ನಗರ ಭಾಗದವರು. ಅದರಲ್ಲಿ ಒಬ್ಬ ಮಂಗಳೂರಿನವನಾಗಿದ್ದಾನೆ. ಐವರು ಆರೋಪಿಗಳು  ಹಲವು ದಿನಗಳಿಂದ ಅಪಹರಣಕ್ಕೆ ಸ್ಕೆಚ್ ಹಾಕಿದ್ದರು.  ಪ್ರಮುಖ ಆರೋಪಿ ಬಾಲಕನ ತಾತನ ಆರೈಕೆ ಮಾಡುತ್ತಿದ್ದ. ಮನೆಯಲ್ಲೇ ಅವರ ತಾತನನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು. ಇಬ್ಬರು ಚಾಲಕರು ಇಬ್ಬರು, ಡೇ ಕೇರ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಮತ್ತೊಬ್ಬನಿಗೆ ಏನು ಕೆಲಸ ಇರಲಿಲ್ಲ. ಸಾಲ ಮಾಡಿ ಹಣದ ಅವಶ್ಯಕತೆಗಾಗಿ ಅಪಹರಣ ಮಾಡಿದ್ದು ನಂತರ ಬಾಲಕನನ್ನು ಅವರೇ ಬಿಟ್ಟು ಹೋಗುವಂತೆ ಮಾಡಲಾಯಿತು.

ಟಾರ್ಗೆಟ್ ಮಾಡಿ ಅಪಹರಣ ಮಾಡಲಾಗಿತ್ತು. ಅಪಹರಣ ಮಾಡಿದವರು ಒಬ್ಬರಿಗೊಬ್ಬರು ಪರಿಚಯದವರಾಗಿದ್ದರು. ಬಾಲಕನನ್ನು ಬಿಟ್ಟು ಹೋದ 12 ಗಂಟೆಯ ಒಳಗೆ ಆರೋಪಿಗಳನ್ನ ವಿರಾಜಪೇಟೆಯಲ್ಲಿ ಬಂಧಿಸಲಾಗಿದೆ. ಅಪಹರಣಕ್ಕಾಗಿ ಎರಡು ಕಾರನ್ನು ಬಳಸಲಾಗಿತ್ತು. 2 ಕಾರು, 5 ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ. ಬಾಲಕನಿಗೆ ಯಾವುದೇ ಹಲ್ಲೆ ಮಾಡಿಲ್ಲ ಎಂದು ಕಮಿಷನರ್ ಡಾ ಚಂದ್ರಗುಪ್ತ ಮಾಹಿತಿ ನೀಡಿದರು.

ಖಾಸಗಿ ಆರೈಕೆ, ಸಾಂತ್ವನ ಕೇಂದ್ರಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವವರ ಬಗ್ಗೆ ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರು ಹೆಚ್ಚಿನ ನಿಗಾ ವಹಿಸಬೆಕು. ಖಾಸಗಿ ಸೇವಾ ಸಂಸ್ಥೆಗಳ ಕೆಲಸಗಾರರ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಪೂರ್ವಪರ ತಿಳಿದು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು. ಖಾಸಗಿ ಸೇವಾ ಸಂಸ್ಥೆಗಳ ಮೂಲಕ ಮನೆಗಳಿಗೆ ಬಂದು ವಯೋವೃದ್ದರನ್ನು ನೋಡಿ ಕೊಳ್ಳುವವರ ಬಗ್ಗೆ ಜಾಗೃತರಾಗಿರಬೇಕು ಎಂದು  ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಸಲಹೆ ನೀಡಿದರು.

Key words: Child-kidnap-case –Mysore-five – Arrest