ಸಿಇಟಿ ಐದು ವಿಭಾಗಗಳಲ್ಲೂ ‘ಫಸ್ಟ್ ರ್ಯಾಂಕ್’ ಪಡೆದ ಮೈಸೂರಿನ ಮೇಘನ್‌  ಕನಸು ಏನು ಗೊತ್ತೆ..?

ಮೈಸೂರು,ಸೆಪ್ಟಂಬರ್,20,2021(www.justkannada.in): 2020-21ನೇ ಸಾಲಿನ ಸಿಇಟಿ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟಗೊಂಡು  ಮೈಸೂರಿನ ಪ್ರಮತಿ ಹಿಲ್ ವ್ಯೆ ಅಕಾಡಮಿಯ ಮೇಘನ್ ಎಚ್.ಕೆ. ಐದು ಕೋರ್ಸ್‌ಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಫಲಿತಾಂಶ ಪ್ರಕಟಗೊಂಡು ಪ್ರಥಮ ಸ್ಥಾನ ಬಂದ ಬಳಿಕ  ತನ್ನ ಸಂತಸ ಹಂಚಿಕೊಂಡಿರುವ ಮೇಘನ್ ಎಚ್.ಕೆ,  ಡಾಕ್ಟರ್ ಆಗುವ ಕನಸು ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾರೆ. ನನಗೆ ಬಾಲ್ಯದಿಂದಲೂ ಡಾಕ್ಟರ್ ಆಗುವ ಕನಸು ಇದೆ. ಹಾಗಾಗಿ ನೀಟ್ ಪರೀಕ್ಷೆಯನ್ನು ಬರೆದಿದ್ದು, ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದೇನೆ. ಐದು ಕೋರ್ಸ್‌ಗಳಲ್ಲಿ ಪ್ರಥಮ ರ್ಯಾಂಕ್ ಪಡೆಯಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಜಸ್ಟ್ ಕನ್ನಡಕ್ಕೆ ತಿಳಿಸಿದ್ದಾರೆ.

ಆನ್ ಲೈನ್‌ನಲ್ಲೇ ಪಾಠ ಕೇಳಿದ್ದ ನಮಗೆ ಕೊರೊನಾದಿಂದ ಸ್ವಲ್ಪ ಕಷ್ಟ ಆಯಿತು. ಆನ್‌ಲೈನ್‌ನಲ್ಲಿ ತರಗತಿ ಎದುರಿಸಬೇಕಾಯಿತು. ಸಿಇಟಿ ಪರೀಕ್ಷೆ ಚೆನ್ನಾಗಿ ಮಾಡಿದ್ದೆ. ಆದರೆ, ಮೂರು ಕೋರ್ಸ್‌ಗಳಲ್ಲಿ ಮೊದಲ ಸ್ಥಾನ ಬರುವ ನಿರೀಕ್ಷೆ ಇರಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮ ತುಂಬಾ ಪ್ರೋತ್ಸಾಹ ನೀಡಿದರು. ಕಾಲೇಜಿನಲ್ಲಿ ಅಧ್ಯಾಪಕರು ಅನುಮಾನಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದ್ದರು. ನನ್ನ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದು, ಎಲ್ಲಾ ಟೆಸ್ಟ್‌ ನಲ್ಲೂ ಉತ್ತಮ ಅಂಕ ಪಡೆಯಲು ನೆರವಾಗುತ್ತಿದ್ದರು. ದಿನದಲ್ಲಿ ಎಷ್ಟು ಓದಬೇಕೆಂದು ಪ್ಲ್ಯಾನ್ ಮಾಡುತ್ತಿದ್ದೆ. ಆಕಾಶ್ ಇನ್ಸಿಟಿಟ್ಯೂಟ್‌ ನಲ್ಲಿ ಕೋಚಿಂಗ್ ತಗೊಂಡಿದ್ದೆ,’’ ಎಂದು ತಮ್ಮ ಸಂತಸ ಹಂಚಿಕೊಂಡರು.

ರಾಮಕೃಷ್ಣನಗರದ ನಿವಾಸಿಯಾದ ಕೃಷ್ಣಯ್ಯ ಎಚ್.ಕೆ. ಹಾಗೂ ಲೀಲಾವತಿ ಎಂ.ಎಸ್. ದಂಪತಿ ಪುತ್ರನಾದ ಮೇಘನ್, ಪಿಯುಸಿ ಸಿಬಿಎಸ್‌ಇಯಲ್ಲಿ 500ಕ್ಕೆ 494 ಅಂಕ ಪಡೆದುಕೊಂಡಿದ್ದರು. ಇದೀಗ ಸಿಇಟಿಯಲ್ಲಿ ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್, ಕೃಷಿ, ಬಿ-ಫಾರ್ಮ, ಯೋಗ ಮತ್ತು ನ್ಯಾಚುರೋಪಥಿ, ಪಶು ವೈದ್ಯಕೀಯದಲ್ಲಿ ಪ್ರಥಮ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೇಘನ್ ತಂದೆ ಕೃಷ್ಣಯ್ಯ  ಕೆ.ಆರ್. ನಗರ ಸರಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ತಾಯಿ ನೃಪತುಂಗ ಕನ್ನಡ ಶಾಲೆಯಲ್ಲಿ ಪ್ರಿನ್ಸಿಪಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಈ ಮಧ್ಯೆ ತಮ್ಮ ಮಗನ ಸಾಧನೆ ಬಗ್ಗೆ ಖುಷಿ ಹಂಚಿಕೊಂಡಿರುವ ಕೃಷ್ಣಯ್ಯ ಎಚ್.ಕೆ, ‘ಸಾಕಷ್ಟು ಪರಿಶ್ರಮಪಟ್ಟಿದ್ದಾನೆ. ಯಾರೊಂದಿಗೂ ತನ್ನನ್ನು ಹೋಲಿಕೆ ಮಾಡಿಕೊಳ್ಳುತ್ತಿರಲಿಲ್ಲ. ಸದಾ ತಾಳ್ಮೆಯಿಂದ ಓದುತ್ತಿದ್ದನು. ಓದಲು ತನ್ನದೇ ಆದ ಪ್ರತ್ಯೇಕ ವೇಳಾಪಟ್ಟಿ ತಯಾರಿಸಿಕೊಂಡಿದ್ದನು. ನೀಟು ಪರೀಕ್ಷೆ ಬರೆದಿದ್ದು ಮಗನ ಸಾಧನೆ ಬಗ್ಗೆ ಖುಷಿ ಇದೆ.’ ಎಂದು  ಹೇಳಿದರು.

Key words: CET- Mysore –Student-first rank- dream