ರೇಷ್ಮೆ ಖರೀದಿಸಿ ಬೆಳೆಗಾರರು, ರೀಲರ್‌ಗಳನ್ನು ಸಂಕಷ್ಟದಿಂದ ಪಾರು ಮಾಡಿ: ಮಾಜಿ ಸಿಎಂ ಎಚ್ಡಿಕೆ ಸರಣಿ ಟ್ವೀಟ್

ಬೆಂಗಳೂರು, ಜುಲೈ 23, 2020 (www.justkannada.in): COVID19 ಮತ್ತು ಲಾಕ್‌ಡೌನ್‌ಗಳಿಂದಾಗಿ ಮಾರುಕಟ್ಟೆ ಇಲ್ಲದೇ ರಾಜ್ಯದಲ್ಲಿ 1000 ಕೋಟಿ ಮೌಲ್ಯದ ರೇಷ್ಮೆ ಖರೀದಿಯಾಗದೇ ಉಳಿದಿದೆ ಎಂಬ ಸಂಗತಿ ರೀಲರ್‌ಗಳು, ಬೆಳೆಗಾರರೊಂದಿಗೆ ಇಂದು ನಡೆಸಿದ ಚರ್ಚೆಯಲ್ಲಿ ತಿಳಿಯಿತು. ಸರ್ಕಾರ ಕೂಡಲೇ ₹450–500 ಕೋಟಿ ಮೊತ್ತದ ರೇಷ್ಮೆ ಖರೀದಿಸಿ ಬೆಳೆಗಾರರು, ರೀಲರ್‌ಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ….

ಒಂದು ಕಡೆ ಚೀನಾದ ರೇಷ್ಮೆ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. ನಮ್ಮ ರೈತರು ಮತ್ತು ರೀಲರ್‌ಗಳನ್ನು ಮುಗಿಸಲು ಆರಂಭಿಸಿದೆ. ಸರ್ಕಾರವೂ ಈಗ ಸಮಸ್ಯೆಗಳಿಗೆ ಕಣ್ಣು ಮುಚ್ಚಿ ಕುಳಿತು ರೇಷ್ಮೆ ಉದ್ದಿಮೆಯನ್ನೇ ಕೊಲ್ಲಬಾರದು. ಸರ್ಕಾರ ರೇಷ್ಮೆ ಬೆಳೆಗಾರರು ಮತ್ತು ರೀಲರ್‌ಗಳ ರಕ್ಷಣೆಗೆ ಕೂಡಲೇ ಧಾವಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು.

ಸರ್ಕಾರ ಈಗ ರೇಷ್ಮೆಯನ್ನು ಖರೀದಿಸಿಟ್ಟುಕೊಳ್ಳಲಿ. ಮಾರುಕಟ್ಟೆ ಚೇತರಿಸಿಕೊಂಡ ನಂತರ ಒಳ್ಳೆ ಬೆಲೆಗೆ ಸರ್ಕಾರವೇ ಮಾರಿಕೊಳ್ಳಲಿ. ಆದರೆ, ಕೂಡಲೇ ರೀಲರ್‌ಗಳಿಂದ ರೇಷ್ಮೆ ಖರೀದಿ ಮಾಡಬೇಕು ಎಂಬುದು ಇಂದು ನನ್ನ ಜೊತೆ ಚರ್ಚೆಯಲ್ಲಿ ಭಾಗವಹಿಸಿದ್ದ ರೀಲರ್‌ಗಳ ಆಗ್ರಹವಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಂತಿಮವಾಗಿ ರೈತ, ರೀಲರ್‌ಗಳ ಹಿತ ಕಾಯಬೇಕು.

#Covid19 ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ. ಕೋವಿಡ್‌ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ.

#Covid ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ.

ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್‌ ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್‌ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ.