ಬೊಮ್ಮಾಯಿ ಯೋಗದಿಂದ ಸಿಎಂ ಆದವರು, ಯೋಗ್ಯತೆಯಿಂದಲ್ಲ: ಧ್ರುವನಾರಾಯಣ್ ಟೀಕೆ

ಮೈಸೂರು, ಸೆಪ್ಟೆಂಬರ್ 11, 2022 (www.justkannada.in): ಬಸವರಾಜ ಬೊಮ್ಮಾಯಿ ಅವರು ಯೋಗದಿಂದ ಸಿಎಂ ಆದವರು. ಯೋಗ್ಯತೆ ಯಿಂದಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗದಿಂದ ಬಂದಿದ್ದು ಕ್ಷಣಿಕ. ಯೋಗ್ಯತೆಯಿಂದ ಬಂದಿದ್ದು ಶಾಶ್ವತ. ನಿಮಗೆ ನೆನಪಿರಲಿ. ಕಾಂಗ್ರೆಸ್ ಸರಕಾರ –  ಬಿಜೆಪಿ ಸರಕಾರದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದರು.

ಮುಂದಿನ ಚುನಾವಣೆ ಯಡಿಯೂರಪ್ಪ ಸಾರಥ್ಯ, ಬೊಮ್ಮಾಯಿ ನೇತೃತ್ವ ಎಂದು ಹೇಳುವ ನಳೀನ್ ಕುಮಾರ್, ಹಾಗಾದರೆ ಪಕ್ಷದ ಅಧ್ಯಕ್ಷರಾಗಿ ನಿಮ್ಮ ಪಾತ್ರ ಏನೂ? ಭಜನಾ ಮಂಡಳಿ ಅಧ್ಯಕ್ಷರಾಗಲು ನಳೀನ್ ಕುಮಾರ್ ಕಟೀಲ್ ಸರಿಯಿದ್ದಾರೆ ಎಂದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆ ರಾಹುಲ್ ಗಾಂಧಿ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ಭಯ ಬಂದಿದೆ. ಪೂಜಾರಿ ಬಾಯಲ್ಲಿ ಮಂತ್ರ ಬರಬೇಕಿತ್ತು. ಆದರೆ, ಬಂದಿದ್ದು ಬರೀ ಉಗುಳು. ಮೋದಿ ಅವರ ಮನ್ ಕೀ ಬಾತ್ ಈಗ ಮಂಕೀ ಬಾತ್ ಆಗಿದೆ. ಕಾಂಗ್ರೆಸ್ ದ್ದು 100 ಪರ್ಸೆಂಟ್ ಕಮೀಷನ್ ಸರಕಾರ ಎಂಬ ಆರೋಪ ಸತ್ಯವಾಗಿದ್ದರೆ ಸಿಬಿಐ ತನಿಖೆ ಮಾಡಿಸಿ ಎಂದು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.