ಸಣ್ಣ ಹಿಡುವಳಿದಾರರಿಗೂ ಸಿಗಬೇಕು ಡ್ರೋನ್ ಸೌಲಭ್ಯ ; ತಜ್ಞ ಕೋಟಾ ನಾರಾಯಣ ರಾವ್ ಪ್ರತಿಪಾದನೆ

 

ಬೆಂಗಳೂರು, ನ.19, 2020 : (www.justkannada.in news) : ಭಾರತದಂತಹ ಕೃಷಿ ಆಧಾರಿತ ದೇಶದಲ್ಲಿ ಸಣ್ಣ ಸಣ್ಣ ಹಿಡುವಳಿದಾರರು ಕೂಡ ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಂತಾಗಬೇಕು ಎಂದು ತಜ್ಞ ಕೋಟಾ ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020)ದ ಭಾಗವಾಗಿ ನಡೆದ ವರ್ಚುವಲ್ ಸಂವಾದದಲ್ಲಿ ಆರೋಗ್ಯ, ಕೃಷಿ ಮತ್ತು ವಿಪತ್ತುಗಳ ನಿರ್ವಹಣೆಯಲ್ಲಿ ಡ್ರೋನ್ ಮತ್ತು ರೊಬೋಟ್‌ಗಳು ವಹಿಸುತ್ತಿರುವ ನಿರ್ಣಾಯಕ ಪಾತ್ರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇತ್ತೀಚಿನ ವರ್ಷಗಳಲ್ಲಿ ಡ್ರೋನ್ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸ ಆವಿಷ್ಕಾರಗಳಾಗಿವೆ. ಇದರಿಂದಾಗಿ ರೈತರು ದೊಡ್ಡ ಪ್ರಮಾಣದಲ್ಲಿಯೇ ಡ್ರೋನ್ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ಆದರೆ ಎರಡು-ಮೂರು ಎಕರೆ ಜಮೀನು ಹೊಂದಿರುವ ರೈತರು ಕೂಡ ಈ ತಂತ್ರಜ್ಞಾನವನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಳಸುವಂತಾಗಬೇಕು. ಆ ರೀತಿಯಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದರು.

kannada-journalist-media-fourth-estate-under-loss

ರೈತರು ತಮ್ಮ ಹೊಲಗಳಿಗೆ ಕೀಟನಾಶಕಗಳನ್ನು ಸಿಂಪಡಣೆ ಮಾಡಲು ತಕ್ಕ ಹಾಗೆ ಡ್ರೋನ್‌ಗಳನ್ನು ಸುಧಾರಣೆ ಮಾಡಲಾಗಿದೆ. ನೋಝಲ್ ತಂತ್ರಜ್ಞಾನವೂ ಸಾಕಷ್ಟು ಸುಧಾರಣೆ ಕಂಡಿದೆ. ಕೀಟನಾಶಕ, ಕ್ರಿಮಿನಾಶಕದ ಹನಿಗಳು ಹೊಲದ ನಿರ್ದಿಷ್ಟ ಜಾಗದಲ್ಲಿಯೇ ಬೀಳುವ ಹಾಗೆ ಮಾಡಿದರೆ ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಎಂದು ಅವರು ಸಲಹೆ ನೀಡಿದರು.

ಮೊದಲೆಲ್ಲ ಡ್ರೋನ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಕೇವಲ ಸೇವಾ ಕ್ಷೇತ್ರಗಳಿಗೆ ಮಾತ್ರ ಅವುಗಳ ಬಳಕೆಯಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಕೃಷಿ, ಆರೋಗ್ಯ, ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲೂ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹಾಗಾಗಿ ಈಗ ನಾವೇ ಡ್ರೋನ್ ಅಭಿವೃದ್ಧಿ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿಯೇ ಸಾಕಷ್ಟು ನವೋದ್ಯಮ ಕಂಪೆನಿಗಳು ಹುಟ್ಟಿಕೊಂಡಿವೆ. ಇವೆಲ್ಲವೂ ಉತ್ತಮ ಬೆಳವಣಿಗೆಗಳಾಗಿವೆ. ಆದರೆ ಡ್ರೋನ್ ಕೈಗೆಟಕುವ ಬೆಲೆಯಲ್ಲಿ ದೊರೆಯುವಂತೆ ಮಾಡುವ ದೊಡ್ಡ ಸವಾಲು ನಮ್ಮ ಮುಂದಿದೆ ಎಂದು ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಉಪಗ್ರಹಗಳು ಅತ್ಯುತ್ತಮವಾದ ಚಿತ್ರಗಳನ್ನು ಕಳಿಸುವಂತಹ ಈ ಕಾಲದಲ್ಲಿ ಡ್ರೋನ್‌ಗಳು ಕೂಡ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ನೀಡುವ ಅಗತ್ಯವಿದೆ. ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ಗೆ ಬಳಸುವ ಆರ್‌ಜಿಬಿ ಕ್ಯಾಮರಾಗಳು, ಬಹುವರ್ಣ ಪಟಲಗಳ (ಮಲ್ಟಿಸ್ಪೆಕ್ಟ್ರಂ) ಕ್ಯಾಮರಾಗಳನ್ನು ಕಡಿಮೆ ಬೆಲೆಯಲ್ಲಿ ಬಳಸಲು ಸಾಧ್ಯವಾಗಬೇಕು ಎಂದು ನುಡಿದರು.

kannada-journalist-media-fourth-estate-under-loss

ಕೃಷಿ ವಿಶ್ವವಿದ್ಯಾಲಯದ ತಜ್ಞರಿಗೆ ಡ್ರೋನ್‌ಗಳು ತೆಗೆದ ಚಿತ್ರಗಳನ್ನು ಸಂಸ್ಕರಣ ಮಾಡಲು ಹತ್ತರಿಂದ ಹದಿನೈದು ದಿನಗಳ ಕಾಲಾವಕಾಶ ಬೇಕಾಗುತ್ತಿದೆ. ಇದರಿಂದಾಗಿ ಮಾಹಿತಿಗಳು ರೈತರಿಗೆ ತಲುಪುವುದು ತಡವಾಗುತ್ತಿದೆ. 90 ರಿಂದ 120 ದಿನಗಳ ಬೆಳೆ ಅವಧಿಯನ್ನು ಹೊಂದಿರುವ ರೈತರಿಗೆ ಎರಡು ವಾರ ಅಥವಾ 20 ದಿನಗಳ ಬಳಿಕ ಹವಾಮಾನ, ಕೀಟಗಳ ವಿವರ ಲಭ್ಯವಾದರೆ ಏನೂ ಪ್ರಯೋಜನವಾಗುವುದಿಲ್ಲ. 20 ದಿನಗಳಲ್ಲಿ ಕೀಟಗಳು ಸಾಕಷ್ಟು ಹಾನಿಯನ್ನೇ ಮಾಡಿರುತ್ತವೆ. ಹಾಗಾಗಿ ಈ ನಿಟ್ಟಿನಲ್ಲಿ ಹೆಚ್ಚು ದಕ್ಷತೆಯಿಂದ ನಾವು ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಕೃಷಿ ಉತ್ಪಾದಕತೆಯೂ ಹೆಚ್ಚಾಗಿದೆ. ಹಿಂದೆಲ್ಲ ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸಲಾಗುತ್ತಿತ್ತು. ಅದೂ ಕೂಡ ಈಗ ಗಣನೀಯವಾಗಿ ಕಡಿಮೆಯಾಗಿದೆ. ಒಂದು ಅರ್ಥದಲ್ಲಿ ಡ್ರೋನ್ ಭಾರತದ ಮಟ್ಟಿಗೆ ದೊಡ್ಡ ಚಾಲಕಶಕ್ತಿಯಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ವಿವರಿಸಿದರು.

ಡ್ರೋನ್‌ಗಳು ಈಗ ಅನೇಕ ಮಾದರಿಗಳಲ್ಲಿ, ಸರಣಿಗಳಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಆಟಾಮಿಕ್, ಮಲ್ಟಿಕಾಪ್ಟರ್‌ನಂತಹ ಡ್ರೋನ್‌ಗಳಲ್ಲಿ ನಾವು ಇನ್ನಷ್ಟು ಅಭಿವೃದ್ಧಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ತಂತ್ರಜ್ಞಾನಗಳನ್ನು, ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂದರು.

ಇಷ್ಟಾಗಿಯೂ ಭಾರತದ ಕೃಷಿ ಕ್ಷೇತ್ರ ಪ್ರಗತಿ ಕಾಣುತ್ತಿಲ್ಲ. ಶೇ. 18ರಷ್ಟು ಜಲ ಸಂಪನ್ಮೂಲ, ಶೇ. 22ರಿಂದ 29ರಷ್ಟು ವಿದ್ಯುತ್ ಸೌಲಭ್ಯಗಳನ್ನು ಬಳಸಿಕೊಂಡೂ ಉತ್ಪಾದನೆ ಮಾತ್ರ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮೆಕ್ಕೆಜೋಳ, ಗೋಧಿ, ಭತ್ತದಂತಹ ಬೆಳೆಗಳು ಮೂರು ಪಟ್ಟು ಹೆಚ್ಚಾಗಿ ಅಪಾಯಕಾರಿ ಸ್ಥಿತಿ ಉಂಟಾಗಿದೆ. ದಿನದಿಂದ ದಿನಕ್ಕೆ ಕೀಟನಾಶಕಗಳ ಬಳಕೆ ಏರುಗತಿಯಲ್ಲಿದೆ. ಇವೆಲ್ಲವೂ ಉತ್ತಮ ಸೂಚನೆಗಳಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

dcm-dr-ashwatthanarayan-announces-target-300-billion-digital-economy-ive-years-bangalore-tech-summit-2020

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ನೀರಿನ ಲಭ್ಯತೆ ಶೇ.೮೦ರಷ್ಟು ಕಡಿಮೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಶೇ.40ರಷ್ಟಿದೆ. ಈ ಅವಧಿಯಲ್ಲಿ ಕೃಷಿ ಭೂಮಿಯೂ ಕಡಿಮೆಯಾಗುತ್ತ ಸಾಗಿದೆ. ಹಾಗಾಗಿ ನಮ್ಮ ರೈತರನ್ನು ಹೆಚ್ಚು ಹೆಚ್ಚು ತಂತ್ರಜ್ಞಾನದ ಕಡೆಗೆ ಸೆಳೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಡ್ರೋನ್‌ಗಳು ರೈತರ ಪಾಲಿಗೆ ಅದೃಷ್ಟದ ಬಾಗಿಲನ್ನು ತೆರೆಯಬೇಕು ಎಂದು ನಾರಾಯಣ ರಾವ್ ಆಶಿಸಿದರು.

Bengalore-tech-summit-dcm-cm-karnataka

ಸುಮಾರು ಆರು ವರ್ಷಗಳ ಹಿಂದೆ, ಅಂದರೆ 2014ರ ವೇಳೆಗೆ ಡ್ರೋನ್ ಬಳಕೆಯನ್ನೇ ನಿಷೇಧಿಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ 2018 ಮತ್ತು 2020 ರ ಹೊತ್ತಿಗೆ ಡ್ರೋನ್ ಬಳಕೆ ವಿಚಾರದಲ್ಲಿ ಯೋಚನೆ ಮತ್ತು ಯೋಜನೆಗಳು ಸಂಪೂರ್ಣವಾಗಿ ಬದಲಾದವು. ಈಗ ಇದನ್ನು ಆರೋಗ್ಯ ಹಾಗೂ ವಿಪತ್ತಿನ ನಿರ್ವಹಣೆಯಲ್ಲಿಯೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿರುವುದು ಉತ್ತೇಜನಕಾರಿ ಅಂಶ ಎಂದು ಅಭಿಪ್ರಾಯಪಟ್ಟರು.
ಐಐಟಿ ಬೆಂಗಳೂರು ಮುಖ್ಯಸ್ಥ ಷಡಗೋಪನ್ ಚರ್ಚೆ ನಡೆಸಿಕೊಟ್ಟರು.

 

KEY WORDS : Bengalore-tech-summit-dcm-cm-karnataka