ಸಂಚಾರ ನಿಯಮ ಉಲ್ಲಂಘನೆ: ಆಟೋಚಾಲಕನ ವಿರುದ್ಧ 78 ಪ್ರಕರಣ ದಾಖಲು

Promotion

ಬೆಂಗಳೂರು;ಮೇ-15:(www.justkannada.in)ಸಂಚಾರ ನಿಯಮ ಉಲ್ಲಂಘನೆ ಮಾಡಿ ಪದೇ ಪದೇ ಪೊಲೀಸರಿಂದ ತಪ್ಪಿಸಿಕೊಂಡು ಆಟೋ ಓಡಿಸಿಕೊಂಡು ಹೋಗುತ್ತಿದ್ದ ಚಾಲಕನೊಬ್ಬ ಕೊನೆಗೂ ಸಂಚಾರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನ ವಿರುದ್ಧ ಬರೋಬ್ಬರಿ 78 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿರುವುದು ಗೊತ್ತಾಗಿದೆ.

ಬನಶಂಕರಿ 3ನೇ ಹಂತದ ನಿವಾಸಿ ಚಂದ್ರೇಗೌಡ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆಟೋ ಚಾಲಕ. ಸಂಚಾರ ನಿಯಮಗಳನ್ನು ಪಾಲನೆ ಮಾಡದ ತಪ್ಪಿಗೆ ಕೊನೆಗೂ 7,700 ರೂ. ದಂಡ ಕಟ್ಟಿದ್ದಾನೆ.

ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್‌ ಕ್ರಾಸ್‌ ಬಳಿ ಎಎಸ್ಸೈ ನಾಗಯ್ಯ ಮತ್ತು ಸಿಬ್ಬಂದಿ ತಪಾಸಣೆ ನಡೆಸುವ ವೇಳೆ ಸಂಚಾರ ನಿಯಮ ಉಲ್ಲಂಘನೆ ಆರೋಪದಲ್ಲಿ ಆಟೋವನ್ನು ನಿಲ್ಲಿಸಿದ್ದರು. ಆಟೋ ನೋಂದಣಿ ಸಂಖ್ಯೆಯನ್ನು ‘ಪಿಡಿಎ’ನಲ್ಲಿ ಹಾಕಿದಾಗ ಹಳೇ ಕೇಸ್‌ಗಳೇ 76 ಬಂದಿವೆ. ಹೊಸದಾಗಿ ಎರಡು ಕೇಸ್‌ಗಳು ಸೇರಿದಂತೆ ಒಟ್ಟು 78 ಕೇಸ್‌ಗಳಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿ ದಂಡ ಕಟ್ಟಿ ಆಟೋ ಬಿಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಅಂತಿಮವಾಗಿ ಚಾಲಕ ದಂಡ ಪಾವತಿ ಮಾಡಿ ಆಟೋ ಬಿಡಿಸಿಕೊಂಡು ಹೋಗಿದ್ದಾರೆ ಎಂದು ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ: ಆಟೋಚಾಲಕನ ವಿರುದ್ಧ 78 ಪ್ರಕರಣ ದಾಖಲು
bangalore,traffic rules break,78 cases, against auto driver