ಸರ್ಕಾರಿ ಕಚೇರಿಗಳಲ್ಲಿ ಫೋಟೋ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ: ಸಿದ್ಧರಾಮಯ್ಯ ಟೀಕೆ

ಬೆಂಗಳೂರು,ಜುಲೈ,15,2022(www.justkannada.in): ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ/ವಿಡಿಯೊ ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಿರುವುದು ಸರ್ಕಾರದ ಹೊಣೆಗೇಡಿ ಕ್ರಮವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರ ಪತ್ರಿಕಾ ಹೇಳಿಕೆಯ ವಿವರ ಹೀಗಿದೆ:

40% ಲಂಚಾವತಾರ, ಪಿಎಸ್‌ಐ ನೇಮಕಾತಿ ಹಗರಣ ಸೇರಿದಂತೆ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ನೂರಕ್ಕೂ ಹೆಚ್ಚು ದೊಡ್ಡ ದೊಡ್ಡ ಲಂಚಗುಳಿತನ ಪ್ರಕರಣಗಳು ಬೆಳಕಿಗೆ ಬಂದಿವೆ.

ದಿನ ನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ತೆರೆದರೆ ಸರ್ಕಾರದ ನಾನಾ ಇಲಾಖೆಗಳ ಭ್ರಷ್ಟಾಚಾರಗಳು, ದುರಾಡಳಿತಗಳ ವರದಿಗಳೇ ತುಂಬಿರುತ್ತವೆ. ದಿನ ಬೆಳಗಾದರೆ ನಾಡಿನ ಜನತೆ ರೋಸಿ ಹೋಗುವಷ್ಟು ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗಗೊಳ್ಳುತ್ತಿರುವ ಹೊತ್ತಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.

ಅಲ್ಲಿ ಕೇಂದ್ರ ಸರ್ಕಾರ ಲೋಕಸಭಾ ಅಧಿವೇಶನದ ಚರ್ಚೆ ಸಂದರ್ಭದಲ್ಲಿ ಬಳಸಬಾರದ ಪದಗಳನ್ನು ಪಟ್ಟಿ ಮಾಡಿ ಡೈರಿ ಬಿಡುಗಡೆಗೊಳಿಸಿದೆ. ಅದರಲ್ಲಿ ಭ್ರಷ್ಟ, ಜುಮ್ಲಾಜೀವಿ, ಕೋವಿಡ್ ಸ್ಪೆçಡ್ಡರ್, ಸ್ನೂಪ್‌ಗೇಟ್, ಅಶೇಮ್ಡ್ (ನಾಚಿಕೆಗೇಡು), ಹಿಪಾಕ್ರಸಿ, ಡ್ರಾಮಾ, ಅಸಮರ್ಥ ಸೇರಿದಂತೆ ಸರ್ಕಾರದ ಯೋಗ್ಯತೆಯನ್ನು ಎತ್ತಿ ಹಿಡಿಯುವ ಪದಗಳನ್ನು ಸೇರಿಸಲಾಗಿದೆ.

ಜತೆಗೆ ಲೋಕಸಭಾ ಆವರಣದಲ್ಲಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆಗಳನ್ನು ನಡೆಸದಂತೆ ನಿಷೇಧಿಸಿ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಕ್ರಮ ತಮ್ಮ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಹೇಡಿತನದ್ದಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ ಮಾಡಿದ್ದ ಮನವಿಯನ್ನು ನೆಪವಾಗಿಟ್ಟುಕೊಂಡು ಸರ್ಕಾರ ಈ ಮನವಿಯನ್ನು ತನ್ನ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಮುಂದಾಗಿದೆ.

ಸರ್ಕಾರಿ ನೌಕರರಿಗೆ ಕರ್ತವ್ಯದ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ದುರುದ್ದೇಶದಿಂದ ತೊಂದರೆ ಕೊಟ್ಟರೆ, ಬ್ಲಾಕ್‌ಮೇಲ್ ಮುಂತಾದ ಕಿಡಿಗೇಡಿ ಕೃತ್ಯದ ಕಾರಣಕ್ಕೆ ವಿಡಿಯೊ ಚಿತ್ರೀಕರಣ, ಮೊಬೈಲ್ ಚಿತ್ರೀಕರಣ ಮಾಡಿದರೆ ಅಂತಹ ದುಷ್ಟ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಈಗಲೇ ಸಾಕಷ್ಟು ಅವಕಾಶಗಳಿವೆ.

ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಪ್ರಾಮಾಣಿಕ ಮತ್ತು ಶ್ರದ್ದೆಯಿಂದ ದುಡಿಯುವ ಸರ್ಕಾರಿ ನೌಕರರಿಗೆ ಆತ್ಮಸ್ಥೈರ್ಯ ತುಂಬುವ ನಿಷ್ಠುರ ನಡೆಯನ್ನು ಸರ್ಕಾರ ಇದುವರೆಗೂ ಪ್ರದರ್ಶಿಸಿಲ್ಲ.

ಹೀಗಾಗಿ ಸರ್ಕಾರದ ಈ ಆದೇಶ ಸರ್ಕಾರಿ ನೌಕರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶ ಇಲ್ಲದ, ತನ್ನ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವ ಉದ್ದೇಶ ಹೊಂದಿದೆ ಎಂದೇ ಅರ್ಥೈಸಿಕೊಳ್ಳಬೇಕಿದೆ.

ಜೊತೆಗೆ ಇದುವರೆಗೂ ಸಾರ್ವಜನಿಕರು ಮೊಬೈಲ್ ಕ್ಯಾಮರಾ ಮುಂತಾದವುಗಳ ಮೂಲಕ ಸರ್ಕಾರಿ ನೌಕರರ ಕೆಲಸವನ್ನು ಅಡ್ಡಿಪಡಿಸಿದ ಪ್ರಕರಣಗಳೆಷ್ಟು ? ಎಲ್ಲೆಲ್ಲಿ ಈ ರೀತಿಯ ಪ್ರಕರಣಗಳಾಗಿವೆ ಎಂಬ ಮಾಹಿತಿಯನ್ನು ಪ್ರಕಟಪಡಿಸಬೇಕು.

ಸರ್ಕಾರದ ಈ ನಿರ್ಧಾರದಿಂದ ಕೆಲವೆ ಕೆಲವು ನೌಕರರಿಗೆ, ಭ್ರಷ್ಟರಿಗೆ ಖುಷಿಯಾಗಬಹುದೆ ಹೊರತು ಎಲ್ಲಾ ಸರ್ಕಾರಿ ನೌಕರರಿಗೆ ಅಲ್ಲ. ಅನೇಕ ಸಂದರ್ಭಗಳಲ್ಲಿ ಕಿಡಿಗೇಡಿಗಳು ದಾಂಧಲೆ ಮಾಡುವ ಸಂದರ್ಭದಲ್ಲಿ ನೌಕರರ ನೆರವಿಗೆ ಬಂದಿರುವುದು ಸಾರ್ವಜನಿಕರ ಮೊಬೈಲುಗಳು.

ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ಮೇಲೆ ದುರುದ್ದೇಶದ ವರ್ತನೆ ತಡೆಗಟ್ಟಲು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅದನ್ನು ವೆಬ್ ಕಾಸ್ಟಿಂಗ್ ಮಾಡಬೇಕು. ಸರ್ಕಾರ ಇಷ್ಟನ್ನು ಮಾಡುವವರೆಗೆ ಕನಿಷ್ಠ ಪಾರದರ್ಶಕತೆಗಾಗಿಯಾದರೂ ಇದುವರೆಗೆ ಇದ್ದ ವ್ಯವಸ್ಥೆಯನ್ನು ಮುಂದುವರೆಸಬೇಕು.

ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ತಮ್ಮ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು “ಎಂಜಲು ಕಾಸು ತಿನ್ನುತ್ತಾ ಬಿದ್ದಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಯೇ ಕಲೆಕ್ಷನ್ ಸೆಂಟರ್ ಆಗಿದೆ ಎಂದು ರಾಜ್ಯ ಹೈಕೋರ್ಟ್ ಇತ್ತೀಚಿಗೆ ಛೀಮಾರಿ ಹಾಕಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪೊಲೀಸ್ ಪೇದೆಯಿಂದ ಹಿಡಿದು ಎಡಿಜಿಪಿ ಮಟ್ಟದ ಅಧಿಕಾರಿಗಳವರೆಗೂ ಬಂಧಿತರಾಗಿದ್ದಾರೆ. ಈ ಬಗ್ಗೆ ರಾಜ್ಯ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದೆ. ಇವೆಲ್ಲವೂ ಸರ್ಕಾರದ ಮುಖಕ್ಕೆ ಹಾಕಿದ ಛೀಮಾರಿಗಳು.

ರಾಜ್ಯದಲ್ಲಿ ಆಡಳಿತ ಕುಸಿದಿದೆ. ಲಂಚವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಪ್ರತಿ ಇಲಾಖೆಯಲ್ಲೂ ಸಾವಿರ ಸಾವಿರಗಟ್ಟಲೆ ಕಡತಗಳು ವಿಲೇವಾರಿ ಆಗದೆ ಬಾಕಿ ಉಳಿದಿವೆ. ಇದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಆಕ್ರೋಶ ಮಡುಗಟ್ಟಿದೆ. ಪ್ರತೀ ದಿನ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಪ್ರತಿಭಟನೆಗಳು ದಾಖಲಾಗುತ್ತಿವೆ. ತಿಂಗಳಿಗೆ 400 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ಬೇಡಿಕೆಗಳು ಈಡೇರುತ್ತಿಲ್ಲ. ಇದೂ ಕೂಡ ನಾಡಿನಾದ್ಯಂತ ಜನರ ಸಿಟ್ಟು ನೆತ್ತಿಗೇರಲು ಕಾರಣವಾಗಿದೆ.

ಸಿಟ್ಟಿಗೆದ್ದ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಹೋಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬಾರದು, ಕೆಲಸ ಮಾಡದ, ಲಂಚಕ್ಕಾಗಿ ಪೀಡಿಸುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪ್ರಶ್ನಿಸಬಾರದು ಎನ್ನುವ ದುರುದ್ದೇಶದಿಂದ ಸರ್ಕಾರ ಈ ಆದೇಶ ಹೊರಡಿಸಿದೆ.

ಸರ್ಕಾರದ ಕೆಲಸ ಮತ್ತು ಆಡಳಿತ ಪಾರದರ್ಶಕವಾಗಿ ಇರಬೇಕು ಎನ್ನುವ ಕಾಳಜಿ ಮತ್ತು ಮಹತ್ವಾಕಾಂಕ್ಷೆಯಿಂದಲೇ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಈಗ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಒಳಗಿಂದೊಳಗೇ ದುರ್ಬಲಗೊಳಿಸಲು ಯತ್ನಿಸುತ್ತಿರುವುದರ ಜತೆಗೆ ಲೋಕಸಭಾ ಅಧಿವೇಶನದ ಚರ್ಚೆಯಲ್ಲೂ ಭ್ರಷ್ಟ ಎನ್ನುವ ಪದವನ್ನೇ ಬಳಸದಂತೆ ನಿಷೇಧ ಹೇರಲು ಹುನ್ನಾರ ನಡೆಸಿದೆ.

ಈ ಹುನ್ನಾರಗಳ ಮುಂದುವರಿಕೆಯಾಗಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ದುರುದ್ದೇಶದಿಂದ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಸರ್ಕಾರಿ ನೌಕರರ ಖಾಸಗಿತನಕ್ಕೆ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.

key words: Ban -photo – video- shooting – government offices- Siddaramaiah -criticized