ಸ್ವಯಂಚಾಲಿತ ಉದ್ಯೋಗ ಮಾಹಿತಿ ನೀಡುವ ಎಐ ಆಧಾರಿತ ವೇದಿಕೆಗೆ ಸದ್ಯದಲ್ಲೇ ಅಂತಿಮರೂಪ.

ಬೆಂಗಳೂರು,ಫೆಬ್ರವರಿ,18,2022(www.justkannada.in):  ಉದ್ಯೋಗಾವಕಾಶಗಳ ಬಗ್ಗೆ ಯುವಜನರಿಗೆ ಸ್ವಯಂಚಾಲಿತವಾಗಿ ತಿಳಿಸುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆಧಾರಿತ ತಂತ್ರಜ್ಞಾನ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಸಂಬಂಧಿಸಿದ ಓರಿಯಂಟೇಶನ್ ಮತ್ತು ನೋಂದಣಿ ಹಾಗೂ ಉದ್ಯೋಗಾವಕಾಶ ಕುರಿತು ಮಲ್ಲೇಶ್ವರಂ ಕೌಶಲ್ಯ ಕೇಂದ್ರ ಹಾಗೂ ಡಾ.ಸಿ.ಎನ್. ಅಶ್ವತ್ ನಾರಾಯಣ್ ಪ್ರತಿಷ್ಠಾನಗಳ ಸಹಯೋಗದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಉದ್ದೇಶಿತ ನೂತನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿವರಗಳನ್ನು (ಪ್ರೊಫೈಲ್/ ಬಯೋಡೇಟಾ) ಒಮ್ಮೆ ಅಪ್ಲೋಡ್ ಮಾಡಿದರೆ, ನಂತರದ ದಿನಗಳಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತನ್ನಿಂತಾನೇ ಮಾಹಿತಿ ಕೊಡಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಎನ್ ಇಪಿ ಪ್ರಕಾರ ಉನ್ನತ ಶಿಕ್ಷಣವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ವರ್ಚುಯಲ್ ರೂಪಾಂತರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ತಕ್ಕಂತೆ ಪಠ್ಯಕ್ರಮ ಮತ್ತು ಬೋಧನಾ ಕ್ರಮಗಳನ್ನೆಲ್ಲ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಈ ಹೊಸ ರೀತಿಯ ಕಲಿಕೆಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದು ಅವರು ನುಡಿದರು.

ಯುವಜನರು ಸಂತೃಪ್ತಿಯ ವರ್ತುಲದಿಂದ ಹೊರಬಂದು, ಆಧುನಿಕ ಜ್ಞಾನಧಾರೆಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕು. ಉನ್ನತ ಶಿಕ್ಷಣದಲ್ಲಿ ಅಳವಡಿಸಿರುವ ಸ್ಪ್ರಿಂಗ್ ಬೋರ್ಡ್ ಕಾರ್ಯಕ್ರಮದ ಮೂಲಕ ಯಾವುದೇ ವಿಭಾಗದ ವಿದ್ಯಾರ್ಥಿಗಳು ಎಲ್ಲಿಂದ ಬೇಕಾದರೂ 1,200 ಪ್ರೋಗ್ರಾಂಗಳನ್ನು ಉಚಿತವಾಗಿ ಕಲಿಯಬಹುದು. ಇದನ್ನೆಲ್ಲ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೃತಕ ಬುದ್ಧಿಮತ್ತೆ, ಡೇಟಾ ಅನಲಿಟಿಕ್ಸ್, ಬ್ಲ್ಯಾಕ್ ಚೈನ್, ರೋಬೋಟಿಕ್ಸ್, ಐಓಟಿ ಜ್ಞಾನಧಾರೆಗಳು ಇಂದು ಜಗತ್ತನ್ನು ಆಳುತ್ತಿವೆ. ಆದ್ದರಿಂದ ಯುವಜನರು ಉದ್ಯಮಲೋಕದ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಮಲ್ಲೇಶ್ವರಂ ಕೌಶಲ್ಯ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಜಾಗೃತಿ ಮತ್ತು ಅವುಗಳಿಂದಾಗುವ ಲಾಭ ಕುರಿತು ಉಚಿತ ಸರ್ಟಿಫಿಕೇಷನ್ ಪ್ರೋಗ್ರಾಂ ಒದಗಿಸಲಾಗುವುದು ಎಂದು ಅವರು ವಿವರಿಸಿದರು.

ಇದಲ್ಲದೆ, ಉದ್ಯೋಗ ಗಿಟ್ಟಿಸಿಕೊಳ್ಳಲು ಕೂಡ ಅಗತ್ಯ ನೆರವು ಮತ್ತು ಉಚಿತ ತರಬೇತಿ ಕೂಡ ನೀಡಲಾಗುವುದು. ಜತೆಗೆ ಬಿಪಿಒ ತರಬೇತಿ, ಸಾಫ್ಟ್ ಸ್ಕಿಲ್, ಸಂದರ್ಶನ ಎದುರಿಸುವುದು ಹೇಗೆ, ಸಾಫ್ಟ್ ವೇರ್ ಡೆವಲಪ್, ಅಕೌಂಟ್ಸ್ ಎಕ್ಸಿಕ್ಯುಟೀವ್ ಮುಂತಾದವನ್ನು ಸಹ ಇಲ್ಲಿ ಕಲಿಸಲಾಗುವುದು ಎಂದು ಅಶ್ವತ್ ನಾರಾಯಣ್ ನುಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ನಾಯಕರಾದ ಕಾವೇರಿ ಕೇದಾರನಾಥ್, ಹೇಮಲತಾ, ಮಂಜುನಾಥ್ ಮುಂತಾದವರಿದ್ದರು.

Key words: automated -employment –information-minister-ashwath narayan