ಬಿಜೆಪಿ ಸೇರುವ ನಿರ್ಧಾರ ಸದ್ಯಕ್ಕಿಲ್ಲ, ಮಂಡ್ಯ ಜನರ ಜತೆ ಚರ್ಚಿಸಿ ಬಳಿಕ ತೀರ್ಮಾನ: ಸುಮಲತಾ ಅಂಬರೀಶ್

ಬೆಂಗಳೂರು, ಮೇ 26, 2019 (www.justkannada.in): ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆಯಾಗಬೇಕೆ ಇಲ್ಲವೇ ವಿಷಯಾಧಾರಿತ ಬೆಂಬಲ ನೀಡಬೇಕೆ ಎಂಬುದರ ಬಗ್ಗೆ ಜಿಲ್ಲೆಯ ಜನತೆಯ ಜೊತೆ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳುತ್ತೇನೆ ಹೇಳಿದರು.

ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದೇನೆ. ಜಿಲ್ಲೆಯಲ್ಲಿ ನನಗೆ ಎಲ್ಲ ಮತದಾರರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಗೆ ಹೋಗಬೇಕೆ ಇಲ್ಲವೇ ಕೇಂದ್ರದಲ್ಲಿ ಬಾಹ್ಯ ಬೆಂಬಲ ನೀಡುವುದರ ಕುರಿತು ಜಿಲ್ಲೆಯ ಜನರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.