ಗೆಳೆಯ ನಿಖಿಲ್ ಕುಮಾರಸ್ವಾಮಿ ವಿಶ್ ಗೆ ಅಭಿಷೇಕ್ ಅಂಬರೀಶ್ ನೀಡಿದ ಪ್ರತಿಕ್ರಿಯೆಯೇನು

ಬೆಂಗಳೂರು:ಮೇ-31:(www.justkannada.in) ಇಂದು ದೇಶಾದ್ಯಂತ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಭಿಷೇಕ್ ಸ್ನೇಹಿತ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದರು. ಅಲ್ಲದೇ ಮಂಡ್ಯ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರನ್ನು ಅಭಿನಂದಿಸಿ, ತನ್ನ ಸೋಲಿನ ಬಗ್ಗೆಯೂ ಪರಾಮರ್ಶಿಸಿದ್ದರು. ಈಗ ನಿಖಿಲ್ ವಿಶ್ ಗೆ ನಟ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅಭಿಷೇಕ್, ಧನ್ಯವಾದ ಗೆಳೆಯಾ.. ನಿಜಕ್ಕೂ ಇದು ಖುಷಿಯ ವಿಚಾರ. ನಿನಗೂ ಗೊತ್ತಿರುತ್ತೆ, ಮೊದಲ ಸಿನಿಮಾ ಬಿಡುಗಡೆ ಆಗುವ ಕ್ಷಣ ಹೇಗಿರುತ್ತೆ ಅನ್ನೋದು… ನಿನ್ನ ಮಾತುಗಳು ನಿನಗೆ ನನ್ನ ಮೇಲಿರುವ ಪ್ರೀತಿಯನ್ನು ತೋರುತ್ತದೆ. ಜೊತೆಗೆ, ಕನ್ನಡ ಸಿನಿಮಾ ಇಂಡಸ್ಟ್ರಿಯ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ನಾವಿಬ್ಬರೂ ಇದೇ ರೀತಿ ಸ್ನೇಹಿತರಾಗಿ ಮುಂದುವರೆಯೋಣ.. ಒಬ್ಬ ಸ್ನೇಹಿತನಾಗಿ ನಾನು ನಿನ್ನ ಯಶಸ್ಸನ್ನು ಸದಾ ಬಯಸುತ್ತೇನೆ…

ಹಿನ್ನಡೆಗಳಿಂದ ನಿರಾಶೆಗೊಳ್ಳಬೇಡ… ಏಕೆಂದರೆ ಅದು ಜೀವನದ ಭಾಗವೆಂದು ನಮಗೆ ತಿಳಿದಿದೆ… ಮಂಡ್ಯದ ಜಿಲ್ಲೆಯ ಬಗ್ಗೆ ನಿಮ್ಮ ಮಾತುಗಳು ಬಹಳ ಪ್ರೋತ್ಸಾಹದಾಯಕವಾಗಿವೆ… ನೀನು ನನ್ನ ತಾಯಿಯ ಪ್ರಯತ್ನವನ್ನು ಬೆಂಬಲಿಸುತ್ತಾ ಮುಂದುವರೆದರೆ ನಾವು ಎಲ್ಲರೂ ಮಂಡ್ಯದ ಸುಧಾರಣೆಗೆ ಒಟ್ಟಿಗೇ ಕೆಲಸ ಮಾಡಬಹುದು… ಮಂಡ್ಯದ ಬಗ್ಗೆ ನೀವು ಹೇಳಿರುವಂಥ ಪ್ರೋತ್ಸಾಹದ ಅಂಶಗಳು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿ… ನಿಮ್ಮ ಮಾತುಗಳಿಗೆ ಧನ್ಯವಾದಗಳು..” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ರಾಜಕೀಯ ದ್ವೇಷವನ್ನು ಮರೆತು ಚುನಾವಣೆಗೂ ಮೊದಲಿದ್ದ ಸ್ನೇಹವನ್ನು ಅಭಿಷೇಕ್ ಮತ್ತು ನಿಖಿಲ್ ಮತ್ತೆ ಮುಂದುವರಿಸಲು ನಿರ್ಧರಿಸಿದಂತಿದೆ.

ಗೆಳೆಯ ನಿಖಿಲ್ ಕುಮಾರಸ್ವಾಮಿ ವಿಶ್ ಗೆ ಅಭಿಷೇಕ್ ಅಂಬರೀಶ್ ನೀಡಿದ ಪ್ರತಿಕ್ರಿಯೆಯೇನು

Abhishek ambareesh reactions for nikhil wish for amar movie release