8 ವಸತಿ ಶಾಲೆ- ವಸತಿ ನಿಲಯಗಳಲ್ಲಿ 784 ಜನ ಕ್ವಾರಂಟೈನ್ ನಲ್ಲಿ : ಸಚಿವ ಗೋವಿಂದ ಎಂ ಕಾರಜೋಳ

ಬೆಂಗಳೂರು, ಏಪ್ರಿಲ್ 16, 2020 (www.justkannada.in): ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮುರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 784 ಜನರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ ಎಂದು ಶ್ರೀ ಗೋವಿಂದ ಎಂ ಕಾರಜೋಳ ತಿಳಿಸಿದರು.

ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯದಲ್ಲಿರುವವರನ್ನು ಭೇಟಿ ಮಾಡಿ, ಅವರ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಸೌಲಭ್ಯ ಹಾಗೂ ಆರೈಕೆಯ ಬಗ್ಗೆ ವಿಚಾರಿಸಿದ ನಂತರ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್‍ನಿಂದ ಬಾದಿತರಾದವರಿಗೆ, ನಿರಾಶ್ರಿತರಿಗೆ, ಅಸಂಘಟಿತ ಕೂಲಿ ಕಾರ್ಮಿಕರಿU, ಅಲೆಮಾರಿ ಜನಾಂಗದವರಿಗೆ ಹಾಗೂ ಆಶ್ರಯ ಕೋರಿ ಬಂದ ಒಟ್ಟು 5108 ಜನರಿಗೆ ಸಮಾಜ ಇಲಾಖೆಯ ವ್ಯಾಪ್ತಿಯ 92 ವಸತಿ ಶಾಲೆಗಳಲ್ಲಿ ಹಾಗೂ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಯಾರೂ ಅನ್ನ, ನೀರು ದೊರಕದೇ ಬಳಲಬಾರದು ಎನ್ನುವುದು ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಆಶಯವಾಗಿದ್ದು, ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಮಾಜ ಕಲ್ಯಾಣ ಇಲಾಖೆಯು ಶ್ರಮಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಸಕ್ರಿಯವಾಗಿ ಕ್ರಮಕೈಗೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

ತೊಂದರೆಗೊಳದ ಯಾವುದೇ ಅಂಘಟಿಕ ಕಾರ್ಮಿಕರು, ಬೇರೆ ಸ್ಥಳಗಳಿಂದ ಬಂದವರು ಆಶ್ರಯ ಬೇಕಾದರೆ ಅಥವಾ ಯಾವುದೇ ತೊಂದರೆಗಳಿದ್ದರೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗಲಿದೆ. ವಸತಿ ನಿಲಯಗಳ ಆಶ್ರಯದಲ್ಲಿರುವವರಿಗೆ ಪ್ರತಿನಿತ್ಯ ತಿಂಡಿ, ಊಟೋಪಚಾರ ನೀಡಿ, ಆರೈಕೆ ಮಾಡಲಾಗುತ್ತಿದೆ. ಸೂಕ್ತ ವಸತಿ, ಸ್ನಾನಗೃಹ ಸೌಲಭ್ಯ ಒದಗಿಸಿ, ಸಾಬೂನು ಸೇರಿದಂತೆ ಮೂಲಭೂತಸೌಕರ್ಯಗಳನ್ನು ನೀಡಲಾಗಿದೆ. ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತಾಲೂಕು ವೈದ್ಯಾಧಿಕಾರಿಯೊಂದಿಗೆ ಸೂಕ್ತ ಸಮನ್ವಯ ಸಾಧಿಸಿಕೊಂಡು ವೈದ್ಯಕೀಯ ತಂಡವು ಇವರ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಕ್ರಮಕೈಗೊಳ್ಳಲಾಗಿದೆ. ಈ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯಗಳ ಸಿಬ್ಬಂದಿ ವರ್ಗದವರು ಶ್ರಮಿಸುತ್ತಿದ್ದಾರೆ. ಈ ವಿದ್ಯಾರ್ಥಿ ನಿಲಯಗಳ ಆಶ್ರಯದಲ್ಲಿರುವವರು ಯಾವುದೇ ಆತಂಕಕ್ಕೊಳಗಾಗಬಾರದು. ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಮಾರ ನಾಯಕ್, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ ಉಪಸ್ಥಿತರಿದ್ದರು.